''ಬಿಹಾರದಲ್ಲಿ ತೇಜಸ್ವಿಯಾದವ್ ಯುಗ ಆರಂಭಕ್ಕೆ ಕ್ಷಣಗಣನೆ!''
ಪಾಟ್ನ, ನ.9: ಬಿಹಾರದಲ್ಲಿ ಯುವ ನೇತಾರ ತೇಜಸ್ವಿ ಯಾದವ್ ಯುಗ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ರಾಷ್ಟ್ರೀಯ ಜನತಾ ದಳದ ಹಿರಿಯ ಮುಖಂಡ ಶಿವಾನಂದ್ ತಿವಾರಿ ಹೇಳಿದ್ದಾರೆ.
ಇಂಡಿಯಾ ಟಿವಿ ಜೊತೆ ಮಾತನಾಡುತ್ತಾ, ''ಚುನಾವಣೆ ಫಲಿತಾಂಶದ ಬಗ್ಗೆ ಆತ್ಮವಿಶ್ವಾಸ ಇದ್ದೇ ಇದೆ. ಆದರೆ, ಫಲಿತಾಂಶದಲ್ಲಿ ಏನೇ ವ್ಯತ್ಯಾಸವಾದರೂ ತಾಳ್ಮೆ ಕಳೆದುಕೊಳ್ಳದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ, ಅನಾಗರಿಕ ನಡವಳಿಕೆಯನ್ನು ಪಕ್ಷ ಸಹಿಸುವುದಿಲ್ಲ. ವಿಜಯೋತ್ಸವ ಆಚರಣೆ ಹೆಸರಿನಲ್ಲಿ ಪಕ್ಷಕ್ಕೆ ಕೆಟ್ಟ ಹೆಸರು ತರಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.
ಬಿಹಾರ ಚುನಾವಣೆ: ಇಂಡಿಯಾ ಟುಡೇ EXIT poll ಅಪ್ಡೇಟ್ಸ್
ನಿತೀಶ್ ಕುಮಾರ್ ಅವರ ಯುಗ ಅಂತ್ಯವಾಗಲಿದ್ದು, ಇದರೊಂದಿಗೆ ಮೋದಿ ಅಲೆಯು ಕ್ಷೀಣಿಸಲಿದೆ. ಬಿಹಾರದಲ್ಲಿ ಯುವ ಮಖಂಡ ತೇಜಸ್ವಿ ಯಾದವ್ ಪರ ಮತದಾರರು ಒಲವು ತೋರಿಸಲಿದ್ದು, ಹೊಸ ಯುಗ ಆರಂಭವಾಗಲಿದೆ ಎಂದು ಶಿವಾನಂದ್ ಹೇಳಿದರು.
''ಬಿಜೆಪಿ ನಾಯಕರು ಮತಗಳ ಧ್ರುವೀಕರಣಕ್ಕೆ ಯತ್ನಿಸಿದರೂ ತೇಜಸ್ವಿ ಸವಾಲನ್ನು ಸ್ವೀಕರಿಸಿ ಗೆದ್ದಿದ್ದಾರೆ .ನಿತೀಶ್ ಕುಮಾರ್ ಸರ್ಕಾರದ ಭ್ರಷ್ಟಾಚಾರದಿಂದ ಜನತೆ ಬೇಸತ್ತಿದ್ದು, ವಲಸೆ ಕಾರ್ಮಿಕರ ಪರ ನಿಲ್ಲದ ಸರ್ಕಾರದ ವಿರುದ್ಧ ಎಲ್ಲರೂ ಮತ ಹಾಕಿದ್ದಾರೆ'' ಎಂದು 77 ವರ್ಷ ವಯಸ್ಸಿನ ಹಿರಿಯ ಮುಖಂಡ ಹೇಳಿದರು
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ.