ಎನ್ ಡಿಎ ಜೊತೆ ಬ್ರೇಕಪ್ ಗೆ ಸಿದ್ಧವಾಗಿದೆ ಇನ್ನೊಂದು ಪಕ್ಷ!
ಪಾಟ್ನಾ, ಡಿಸೆಂಬರ್ 06: ಎನ್ ಡಿಎ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗ ಅದರೊಂದಿಗಿದ್ದ ಎಷ್ಟೊ ಪಕ್ಷಗಳು ಇಂದು ಅದರ ಜೊತೆಯಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎನ್ ಡಿಎ ಯಿಂದ ದೂರವಾಗಲು ಮತ್ತಷ್ಟು ಪಕ್ಷಗಳು ಹವಣಿಸುತ್ತಿವೆಯಾ? ಈ ಮಾತಿಗೆ ಪೂರಕ ಎಂಬಂತೆ ರಾಷ್ಟ್ರೀಯ ಲೋಕ ಸಮತಾ ಪಕ್ಷ(ಆರ್ ಎಲ್ ಎಸ್ ಪಿ)ದ ನಾಯಕ ಉಪೇಂದ್ರ ಕುಶ್ವಾಹಾ ಎನ್ ಡಿಎ ಜೊತೆ ಮೈತ್ರಿ ಕಡಿದುಕೊಳ್ಳುವ ಸೂಚನೆ ನೀಡಿದ್ದಾರೆ.
ಬಿಹಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆರ್ ಎಲ್ ಎಸ್ ಪಿಗೆ ತಾವು ಕೇಳಿದಷ್ಟು ಸೀಟು ನೀಡಬೇಕೆಂಬ ಬೇಡಿಕೆಯನ್ನು ಉಪೇಂದ್ರ ಕುಶ್ವಾಹಾ ಇಟ್ಟಿದ್ದರು. ಆದರೆ ಇದಕ್ಕೆ ಬಿಜೆಪಿ ಸೊಪ್ಪು ಹಾಕುವಂತೆ ಕಾಣಿಸುತ್ತಿಲ್ಲ. ಅದು ಅಲ್ಲದೆ, ಬಿಹಾರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸಿಗದೆ ಇರುವ ಕಾರಣಕ್ಕೆ ಕುಶ್ವಾಹಾ ಮತ್ತಷ್ಟು ಕೋಪಗೊಂಡಿದ್ದಾರೆ.
ಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿ
ಈಗಾಗಲೇ ಜೆಡಿಯು ಜೊತೆಗೂ ಬಿಜೆಪಿ ಸಂಬಂಧ ಅಷ್ಟು ಸರಿ ಇದ್ದಮತಿಲ್ಲ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ತನ್ನ ಮೈತ್ರಿ ಪಕ್ಷಗಳೊಂದಿಗೆ ಬಿಜೆಪಿ ಭಿನ್ನಾಭಿಪ್ರಾಯ ತಂದುಕೊಂಡರೆ ನಷ್ಟ ಬಿಜೆಪಿಗೇ. ಹಾಗಂತ ಇದೊಂದೇ ಕಾರಣ ಇಟ್ಟುಕೊಂಡು ಕೇಳಿದಷ್ಟು ಸೀಟು ನೀಡುವುದಕ್ಕೂ ಸಾಧ್ಯವಿಲ್ಲ. ಬಿಜೆಪಿ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದರೆ ಅತ್ತ ಮಹಾಘಟಬಂಧನದ ನಾಯಕರು ಕುಶ್ವಾಹಾ ಅವರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.
"ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಉಳಿದೆಲ್ಲ ಮೈತ್ರಿ ಪಕ್ಷಗಳನ್ನೂ ಕಡೆಗಣಿಸುತ್ತಿದೆ. ತಮ್ಮನ್ನು ಮೂಲೆಗುಂಪು ಮಾಡಲಾಗಿದೆ. ನಾವು ಎನ್ ಡಿಎ ಜೊತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದು ಅನುಮಾನ" ಎಂದು ಕುಶ್ವಾಹ ಸ್ಪಷ್ಟವಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ
2014 ರ ವಿಧಾನಸಭೆ ಚುನಾವಣೆಯಲ್ಲಿ ಬಿಹಾರದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ RLSP ಎಲ್ಲಾ ಮೂರು ಸ್ಥಾನಗಳಲ್ಲೂ ಗೆದ್ದಿತ್ತು. ನಂತರ ಎನ್ ಡಿಎ ಗೆ ಬೆಂಬಲ ಸೂಚಿಸಿತ್ತು.