ಕೇಂದ್ರದಲ್ಲಿ ಕೊಡಲು ಬಂದ 'ಒಂದಕ್ಕೆ' ಪ್ರತಿಯಾಗಿ 'ಒಂದನ್ನೇ' ಕೊಟ್ಟರೆ ನಿತೀಶ್?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರ ಬೇಸರ ಎಲ್ಲರಿಗೂ ಗೊತ್ತಾಗಿದೆ. ಹಾಗೆ ಗೊತ್ತಾಗದವರ ಸಲುವಾಗಿ ಒಮ್ಮೆ ನೆನಪಿಸಿಕೊಳ್ಳೋಣ. ನರೇಂದ್ರ ಮೋದಿ ಅವರ ಕೇಂದ್ರ ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ನಿತೀಶ್ ರ ಜೆಡಿಯುಗೆ ನೀಡಲು ನಿರ್ಧರಿಸಲಾಗಿತ್ತು. ಇದೀಗ ಭಾನುವಾರ ಬಿಹಾರದಲ್ಲಿ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ ನಿತೀಶ್ ಕೂಡ ಬಿಜೆಪಿಗೆ ಒಂದೇ ಸ್ಥಾನ ನೀಡಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ಜೆಡಿಯುನ ಎಂಟು ನಾಯಕರನ್ನು ಸೇರಿಸಿಕೊಂಡಿದ್ದು, ಒಂದು ಸ್ಥಾನವನ್ನು ಮಾತ್ರ ಬಿಜೆಪಿಗೆ ನೀಡಿದ್ದಾರೆ. ಅದು ಕೂಡ ಯಾವ ವ್ಯಕ್ತಿಗೆ ಸಿಗುತ್ತದೆ ಎಂಬುದು ಗೊತ್ತಾಗಬೇಕಿದೆ. ನಮಗೆ ಕೇಂದ್ರದ ಬಗ್ಗೆ ಸಿಟ್ಟೇನೂ ಇಲ್ಲ. ನಾವು ಎನ್ ಡಿಎ ಭಾಗವಾಗಿಯೇ ಇರುತ್ತೇವೆ ಎಂದು ನಿತೀಶ್ ಹೇಳಿದ್ದಾರೆ.
ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಮೈತ್ರಿ ಪಕ್ಷಗಳ ಜತೆ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಸಿಟ್ಟಿದೆ. ಕೇಂದ್ರದಲ್ಲಿ ಒಂದು ಸಂಪುಟ ಸ್ಥಾನ, ಮತ್ತೊಂದು ರಾಜ್ಯ ಖಾತೆ ಸಿಗಬಹುದು ಎಂದು ಜೆಡಿಯು ನಿರೀಕ್ಷೆ ಇರಿಸಿಕೊಂಡಿತ್ತು.

ಬಿಜೆಪಿ- ಜೆಡಿಯು ಮೈತ್ರಿ ಕೂಟದಲ್ಲಿ ಏನೂ ಸಮಸ್ಯೆ ಇಲ್ಲ. ಮೈತ್ರಿ ರಚಿಸಿಕೊಂಡಾಗಲೇ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಹಾಗೂ ಯಾವ ಇಲಾಖೆ ಎಂಬುದು ನಿರ್ಧಾರ ಆಗಿತ್ತು ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಕೇಂದ್ರ ಸಂಪುಟದಲ್ಲಿ ಜೆಡಿಯು ಭಾಗಿ ಆಗುವುದಿಲ್ಲ ಎಂದು ನಿತೀಶ್ ಕುಮಾರ್ ಘೋಷಿಸಿದರು. ಅದಕ್ಕೂ ಮುನ್ನ ಅಮಿತ್ ಶಾ ಜತೆಗೆ ನಿತೀಶ್ ಮಾತುಕತೆ ನಡೆಸಿದ್ದರು. ಆ ನಂತರ ಮಾಧ್ಯಮದವರ ಜತೆ ಮಾತನಾಡಿ, ಜೆಡಿಯು ಸಾಂಕೇತಿಕವಾಗಿ ಕೇಂದ್ರ ಸಂಪುಟದಲ್ಲಿ ಪಾಲ್ಗೊಳ್ಳಲಿದೆ ಎಂಬ ರೀತಿ ಧ್ವನಿ ಇತ್ತು. ಆದ್ದರಿಂದ ಪಕ್ಷದ ಇತರ ನಾಯಕರ ಜತೆ ಮಾತನಾಡಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದೇನೆ ಎಂದು ನಿತೀಶ್ ಹೇಳಿದ್ದರು.
ಜೆಡಿಯು ನಾಯಕ ಕೆ.ಸಿ.ತ್ಯಾಗಿ ಮಾತನಾಡಿದ್ದು, ಭವಿಷ್ಯದಲ್ಲೂ ಜೆಡಿಯು ಕೇಂದ್ರ ಸಂಪುಟದಲ್ಲಿ ಸೇರ್ಪಡೆ ಆಗಲ್ಲ. ಬಿಜೆಪಿಯು ನಮಗೆ ಒಂದು ಸ್ಥಾನ ನೀಡಲು ಬಯಸುತ್ತದೆ. ಅದು ನಮಗೆ ಒಪ್ಪಿಗೆ ಇಲ್ಲ. ಬಿಜೆಪಿ ಜತೆಗೆ ಇನ್ನೇನೂ ಚೌಕಾಶಿ ಮಾಡುವುದರಲ್ಲಿ ಯಾವುದೇ ಉಪಯೋಗ ಇಲ್ಲ. ಜತೆಗೆ ಬಿಹಾರ ಚುನಾವಣೆ ಇರುವುದರಿಂದ ಕೇಂದ್ರ ಸಂಪುಟವನ್ನು ನಾವು ಸೇರುವುದಿಲ್ಲ ಎಂದಿದ್ದರು.
ಬಿಹಾರದಲ್ಲಿ ಬಿಜೆಪಿ ಹದಿನೇಳು, ಆರ್ ಜೆಡಿ ಹದಿನೇಳು ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.












Click it and Unblock the Notifications