ಮುಜಾಫರ್ ಪುರ ರೇಪ್ ಕೇಸ್: ಮಾಜಿ ಸಚಿವೆ ಮಂಜು ವರ್ಮಾ ಶರಣಾಗತಿ
ಪಾಟ್ನ,ನವೆಂಬರ್ 20: ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರು ಮಂಗಳವಾರ(ನವೆಂಬರ್ 20)ದಂದು ಬೆಗುಸರಾಯಿ ಕೋರ್ಟಿನ ಮುಂದೆ ಶರಣಾಗಿದ್ದಾರೆ. ಮುಜಾಫರ್ ಪುರದ ಅಶ್ರಯ ತಾಣಗಳಲ್ಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜು ವರ್ಮಾ ಆರೋಪಿಯಾಗಿದ್ದರು.
ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವೆಯಾಗಿದ್ದ ಮಂಜು ಅವರು ತಮ್ಮ ಮೇಲೆ ಆರೋಪ ಕೇಳಿ ಬಂದ ಬಳಿಕ, ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು.
ಆಶ್ರಯ ತಾಣ, ನಿರ್ಗತಿಕರ ಕೇಂದ್ರಗಳಲ್ಲಿನ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಮಂಜು ವರ್ಮಾ ಅವರ ಮನೆ ಮೇಲೆ ಇತ್ತೀಚೆಸೆ ಸಿಬಿಐ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವುದು ಪತ್ತೆಯಾಗಿತ್ತು. ಹೀಗಾಗಿ, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲೂ ಕೇಸ್ ದಾಖಲಾಗಿದೆ.

ಸುಪ್ರೀಂಕೋರ್ಟ್ ನಿರ್ದೇಶನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್, ಬಿಹಾರದ ಟಾಪ್ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.
ನವೆಂಬರ್ 27ರೊಳಗೆ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸುವಂತೆ ಬಿಹಾರದ ಡಿಜಿಪಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಮಂಜು ವರ್ಮಾ ಅವರು ನಾಪತ್ತೆಯಾಗಿದ್ದಾರೆ ಎಂದು ಅಕ್ಟೋಬರ್ 31ರಂದೆ ಬಿಹಾರ ಸರ್ಕಾರವು, ಕೋರ್ಟಿಗೆ ಮಾಹಿತಿ ನೀಡಿತ್ತು. ಮಂಜು ವರ್ಮಾ ಅವರ ಪತ್ನಿ ಚಂದ್ರಶೇಖರ್ ಅವರು ಕಳೆದ ತಿಂಗಳು, ಮಂಜುಹಾಲ್ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
ಮುಜಾಫರ್ ಪುರದ ಆಶ್ರಯ ಕೇಂದ್ರಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳಗಳು ನಡೆದಿದ್ದು, ಬ್ರಜೇಶ್ ಠಾಕೂರ್ ಎಂಬ ವ್ಯಕ್ತಿ ಮುಖ್ಯ ಆರೋಪಿಯಾಗಿದ್ದಾನೆ ಬ್ರಜೇಶ್ ಜತೆಗೆ ಚಂದ್ರಶೇಖರ್ ವರ್ಮಾ ಅವರು ಅನೇಕ ಬಾರಿ ಫೋನ್ ಕರೆ ಮೂಲಕ ಮಾತನಾಡಿದ್ದಾರೆ.
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (ಟಿಐಎಸ್ಎಸ್) ನಡೆಸಿದ ಸಮಾಜ ಕಲ್ಯಾಣ ಇಲಾಖೆ ಕುರಿತ ವರದಿಯಿಂದ ಈ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿತ್ತು.












Click it and Unblock the Notifications