Breaking: ಬಿಜೆಪಿ ನಮ್ಮ ಶಾಸಕರನ್ನು ಹಣದಿಂದ ಖರೀದಿಸಿದೆ; ಜೆಡಿಯು
ಪಾಟ್ನಾ, ಸೆ.04: ಮಣಿಪುರದ ಆರು ಜೆಡಿಯು ಶಾಸಕರಲ್ಲಿ ಐವರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡ ನಂತರ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿ ಪಕ್ಷವು ಈಶಾನ್ಯ ರಾಜ್ಯದಲ್ಲಿ ತನ್ನ ಶಾಸಕರನ್ನು ಹಣ ನೀಡಿ ಖರೀದಿಸಿದೆ ಎಂದು ಆರೋಪಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಶನಿವಾರ ಆಕ್ರೋಶ ವ್ಯಕ್ತಪಡಿಸಿ, ಮಾಜಿ ಮಿತ್ರ ಪಕ್ಷವು ಇತರ ಪಕ್ಷಗಳ ಶಾಸಕರನ್ನು ಬೇಟೆಯಾಡಲು ಹಣದ ಬಲವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು.
ಕೆ. ಚಂದ್ರಶೇಖರ್ ರಾವ್-ನಿತೀಶ್ ಕುಮಾರ್ ಭೇಟಿ : ತೃತೀಯ ರಂಗ ರಚನೆಯ ಬಗ್ಗೆ ಚರ್ಚೆ?
"ಬಿಜೆಪಿ ಯಾವಾಗಲೂ ಶಾಸಕರನ್ನು ಖರೀದಿಸಲು ಹಣದ ಬಲವನ್ನು ಬಳಸುತ್ತದೆ. ಅವರು ಮಣಿಪುರದಲ್ಲೂ ನಮ್ಮ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಒತ್ತಾಯಿಸಿದ್ದಾರೆ" ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಮತ್ತು ಈಶಾನ್ಯ ಉಸ್ತುವಾರಿ ಅಫಾಕ್ ಅಹಮದ್ ಖಾನ್ ಪಾಟ್ನಾದಲ್ಲಿ ಹೇಳಿದರು.
"ಅವರು ಇದನ್ನು ಮಾಡುತ್ತಿರುವುದು ಇದೇ ಮೊದಲಲ್ಲ, 2020 ರಲ್ಲಿ ನಾವು ಎನ್ಡಿಎ ಭಾಗವಾಗಿದ್ದಾಗ ಅವರು ಅರುಣಾಚಲ ಪ್ರದೇಶದಲ್ಲಿ ನಮ್ಮ ಆರು ಶಾಸಕರನ್ನು ಖರೀದಿಸಿದ್ದರು. ಇದು ಬಿಜೆಪಿಯ ನಿಜವಾದ ಮುಖವನ್ನು ತೋರಿಸುತ್ತದೆ. ಅವರು ನೈತಿಕತೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರು ಏನು ಮಾಡುತ್ತಾರೆ ಎಂಬುದು ಈಗ ಹೊರಬಂದಿದೆ" ಎಂದು ಖಾನ್ ಹೇಳಿದರು.
"ಜನರು ಇದೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು 2024 ರಲ್ಲಿ ಬಿಜೆಪಿಗೆ ತಕ್ಕ ಉತ್ತರವನ್ನು ನೀಡುತ್ತಾರೆ" ಎಂದು ಅಫಾಕ್ ಅಹಮದ್ ಖಾನ್ ವಿಶ್ವಾಸ ವ್ಯಕ್ತ ಪಡಿಸಿದರು.
ಮಣಿಪುರದ ಐವರು ಜೆಡಿಯು ಶಾಸಕರಾದ ಖುಮುಚ್ಚಮ್ ಜೋಯ್ಕಿಶನ್ ಸಿಂಗ್, ಗುರ್ಸಂಗ್ಲೂರ್ ಸನಟೆ, ಮೊಹಮ್ಮದ್ ಅಸಬ್ ಉದ್ದೀನ್, ತಂಗ್ಜಮ್ ಅರುಣ್ಕುಮಾರ್ ಮತ್ತು ಎಲ್ಎಂ ಖೌಟೆ ಬಿಜೆಪಿಗೆ ಸೇರಿದ್ದಾರೆ. ಭಾನುವಾರ ಅಧಿಕೃತವಾಗಿ ಬಿಜೆಪಿ ನಾಯಕ ಜೆಪಿ ನಡ್ಡಾ ಸಮ್ಮುಖದಲ್ಲಿ ಐವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಣಿಪುರ ಸ್ಪೀಕರ್ ತೊಕ್ಚೋಮ್ ಸತ್ಯಬ್ರತ ಸಿಂಗ್ ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದೊಂದಿಗೆ ವಿಲೀನಗೊಳ್ಳುವ ಆಶಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಜೆಡಿಯು ಈ ಕ್ರಮವನ್ನು ಅಸಂವಿಧಾನಿಕ ಎಂದು ಕರೆದಿದೆ.
ಮಣಿಪುರದಲ್ಲಿ ಫೆಬ್ರವರಿ-ಮಾರ್ಚ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಗಳಿಸಿತ್ತು. ಎನ್ಡಿಎಯ ಮತ್ತೊಂದು ಮಿತ್ರ ಪಕ್ಷವಾದ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಏಳು ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜೆಡಿಯು ತಾನು ಸ್ಪರ್ಧಿಸಿದ್ದ 38 ಸ್ಥಾನಗಳ ಪೈಕಿ ಆರರಲ್ಲಿ ಗೆದ್ದರೆ, ಕಾಂಗ್ರೆಸ್ ಕೇವಲ ಐದು ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.