ಹಿಜಾಬ್ ವಿವಾದ: 'ಮುಖ ಮುಚ್ಚಲು ಹೇಳುತ್ತೇವೆ, ತಲೆ ಮುಚ್ಚಿದರೇನಾಯ್ತು' ಎಂದ ಬಿಹಾರ ಸಿಎಂ
ಪಾಟ್ನಾ, ಫೆಬ್ರವರಿ 15: ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆರಂಭವದ ಹಿಜಾಬ್ ವಿವಾದ ಈಗಾಗಲೇ ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಚಾರವಾಗಿದೆ. ಈ ನಡುವೆ ಹಲವಾರು ಮಂದಿ ಪರ, ವಿರೋಧವನ್ನು ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ಹಿಜಾಬ್ ವಿಚಾರದಲ್ಲಿ ಹೇಳಿಕೆಯನ್ನು ನೀಡಿದ್ದು, "ಹಿಜಾಬ್ ವಿವಾದ ದೊಡ್ಡ ಸಮಸ್ಯೆಯೇ ಅಲ್ಲ," ಎಂದಿದ್ದಾರೆ. ಹಾಗೆಯೇ ನಾವು ಮುಖ ಮುಚ್ಚಲು ಹೇಳುತ್ತೇವೆ, ತಲೆಯನ್ನು ಮುಚ್ಚಿಕೊಂಡರೇ ಚರ್ಚಿಸುವಂತದ್ದು ಏನಿದೆ," ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಭುಗಿಳೆದ್ದಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಹಿಜಾಬ್ ವಿವಾದ ಇರುವುದನ್ನು ತಳ್ಳಿ ಹಾಕಿದರು. ಹಿಜಾಬ್ ವಿವಾದ ಸಮಸ್ಯೆ ಎಂದು ಬಿಂಬಿಸುವ ಅಗತ್ಯವಿಲ್ಲ ಎಂದು ಉಡುಪಿಯಲ್ಲಿ ಮೊದಲು ಭುಗಿಲೆದ್ದ ವಿವಾದದ ಬಗ್ಗೆ ತಮ್ಮ ಮೊದಲ ಹೇಳಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದಾರೆ.
"ನಾವು ಕೊರೊನಾ ವೈರಸ್ ಕಾರಣದಿಂದಾಗಿ ಜನರಲ್ಲಿ ಮಾಸ್ಕ್ ಮೂಲಕ ಮುಖವನ್ನು ಮುಚ್ಚಿಕೊಳ್ಳುವಂತೆ ಹೇಳುತ್ತಿದ್ದೇವೆ. ಆದರೆ ಯಾರಾದರೂ ತಮ್ಮ ತಲೆಯನ್ನು ಮುಚ್ಚಿಕೊಂಡರೆ, ಅದರ ಬಗ್ಗೆ ಚರ್ಚಿಸಲು ಏನಿದೆ," ಎಂದು ಪ್ರಶ್ನಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಮ್ಮ ರಾಜ್ಯದಲ್ಲಿ ನಾವು ಧಾರ್ಮಿಕ ಭಾವನೆಗಳನ್ನು ಗೌರವಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸ್ಕಾರ್ಪ್ ಹಾಕಿದರೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದ ನಿತೀಶ್ ಕುಮಾರ್
"ತರಗತಿಯಲ್ಲಿ ಯಾರಾದರೂ ತಲೆಯ ಮೇಲೆ ಏನನ್ನಾದರೂ ಹಾಕಿದರೆ, ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ," ಎಂದು ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇನ್ನು ತಮ್ಮ ರಾಜ್ಯದಲ್ಲಿ ಹಿಜಾಬ್ ವಿವಾದ ಇದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ನಮ್ಮ ರಾಜ್ಯದಲ್ಲಿ ಹಿಜಾಬ್ ಸಮಸ್ಯೆಯೇ ಅಲ್ಲ," ಎಂದು ಹೇಳಿದರು.
"ಇದು ಬಿಹಾರದ ವಿಷಯವಲ್ಲ, ನಾವು ಅಂತಹ ವಿಷಯಗಳ ಬಗ್ಗೆ ಗಮನಹರಿಸಬಾರದು. ಇದು ನಿಷ್ಪ್ರಯೋಜಕವಾಗಿದೆ. ಆದರೆ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ," ಎಂದು ವಿಷಾದವನ್ನು ಕೂಡಾ ನಿತೀಶ್ ಕುಮಾರ್ ವ್ಯಕ್ತಪಡಿಸಿದ್ದಾರೆ. "ಬಿಹಾರದ ಶಾಲೆಗಳಲ್ಲಿ ಮಕ್ಕಳು ಬಹುತೇಕ ಒಂದೇ ರೀತಿಯ ಸಮವಸ್ತ್ರವನ್ನು ಧರಿಸುತ್ತಾರೆ. ಯಾರಾದರೂ ತಲೆಗೆ ಏನಾದರೂ ಹಾಕಿದರೆ ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ನಾವು ಅಂತಹ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ನಾವು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ," ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎಲ್ಲರೂ ಸಮಾನರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ 'ಜನತಾ ಕೇ ದರ್ಬಾರ್ ಮೇ ಮುಖ್ಯಮಂತ್ರಿ' ಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಅಧಿಕಾರವಿರುವ ಕರ್ನಾಟಕದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದ್ದು, ಬಿಹಾರದಲ್ಲಿಯೂ ಜನತಾ ದಳ (ಯುನೈಟೆಡ್) ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರವನ್ನು ನಡೆಸುತ್ತಿದೆ.
ಉಡುಪಿಯಲ್ಲಿ ಮೊದಲು ಹಿಜಾಬ್ ವಿವಾದ ಆರಂಭವಾಗಿದ್ದು, ಈಗ ಹೈಕೋರ್ಟ್ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಒಂದೆಡೆ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಹೇಳಿದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬರಲು ಆರಂಭ ಮಾಡಿದ್ದಾರೆ. ಈ ನಡುವೆ ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೆಟ್ಟಿಲು ಏರಿದ್ದು, ಹೈಕೋರ್ಟ್ ಸದ್ಯ ವಿಚಾರಣೆ ಪೂರ್ಣವಾಗುವವರೆಗೂ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸದಂತೆ ಮಧ್ಯಂತರ ಆದೇಶ ನೀಡಿದೆ. ಸದ್ಯ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications