ಜೆಡಿಯುಗೆ ಸೇರ್ಪಡೆಗೊಂಡ ಬಿಹಾರ ಮಾಜಿ ಡಿಜಿಪಿ ಪಾಂಡೆ
ಪಾಟ್ನಾ, ಸೆ. 27: ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ್ ಪಾಂಡೆ ಅವರು ಭಾನುವಾರ (ಸೆ.27) ಸಂಜೆ ಅಧಿಕೃತವಾಗಿ ಜನತಾ ದಳ (ಸಂಯುಕ್ತ) ಸೇರ್ಪಡೆಗೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಬಗ್ಗೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು. ಮುಂಬೈ ಪೊಲೀಸ್ ಹಾಗೂ ಬಿಹಾರ ಪೊಲೀಸ್ ನಡುವೆ ಕ್ವಾರಂಟೈನ್ ಯುದ್ಧವೇ ನಡೆದು ಹೋಯಿತು. ಪಾಟ್ನಾದ ಐಪಿಎಸ್ ಅಧಿಕಾರಿ ವಿನಯ್ ತಿವಾರಿಯನ್ನು ಬಲವಂತವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಡಿಜಿಪಿ ಹುದ್ದೆಯಿಂದ ಕೆಳಗಿಳಿದಿದ್ದ ಪಾಂಡೆ ಅವರು ರಾಜಕೀಯ ರಂಗ ಪ್ರವೇಶಿಸುವ ಸುಳಿವು ನೀಡಿದ್ದರು.
ಐಪಿಎಸ್ ಅಧಿಕಾರಿ ಪಾಂಡೆ ಅವರು ಸ್ವಯಂ ನಿವೃತ್ತಿ ಪಡೆದುಕೊಂಡು ಜೆಡಿಯು ಸೇರುವುದಾಗಿ ಹೇಳಿದ್ದರು. ಅದರಂತೆ ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಬಕ್ಸರ್ ಕ್ಷೇತ್ರ ಮೂಲದವರಾಗಿದ್ದು, ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧ ಎಂದಿದ್ದಾರೆ.
ಲಭ್ಯ ಮಾಹಿತಿಯಂತೆ ಪಾಂಡೆ ಅವರನ್ನು ವಾಲ್ಮಿಕಿ ನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಜೆಡಿಯು ಸಿದ್ಧತೆ ನಡೆಸಿದೆ. ಜೆಡಿಯು ಸಂಸದ ಅಬಿದ್ಯನಾಥ್ ಮಹ್ತೋ ಅವರ ನಿಧನದಿಂದಾಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ.

ಮತ ಬ್ಯಾಂಕ್ ರಾಜಕೀಯಕ್ಕೆ ಅನುಕೂಲ
ಯಾದವೇತರ ಹಿಂದುಳಿದ ವರ್ಗ, ಪಾಸ್ಮಾಂದ ಮುಸ್ಲಿಮರ ಬೆಂಬಲದ ಮೇಲೆ ಜೆಡಿಯು ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದ್ದು, ಪಾಂಡೆ ಅವರು ಕಣಕ್ಕಿಳಿದರೆ ಬ್ರಾಹ್ಮಣ ಮತಗಳನ್ನು ಸೆಳೆಯಬಹುದು ಎಂದೆನಿಸಲಾಗಿದೆ. 2009ರಲ್ಲೂ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಲೋಕಸಭೆ ಕಣಕ್ಕಿಳಿಯಲು ಯತ್ನಿಸಿ ವಿಫಲರಾಗಿದ್ದರು. ಆದರೆ, ಈ ಬಾರಿ ಅವರ ರಾಜೀನಾಮೆ, ವಿಆರ್ ಎಸ್ ಅವಧಿ ಎಲ್ಲವನ್ನು ರಾಜ್ಯಪಾಲ ಫಗು ಚೌಹಾಣ್ ಒಪ್ಪಿಕೊಂಡಿದ್ದರಿಂದ ರಾಜಕೀಯ ಪ್ರವೇಶಕ್ಕೆ ರಹದಾರಿ ಸಿಕ್ಕಿತು ಎನ್ನಬಹುದು.

ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆ ವಿವಾದ
ಮುಖ್ಯಮಂತ್ರಿ ನಿತೀಶ್ ಕುಮಾರ್ ಕುರಿತು ಹೇಳಿಕೆ ನೀಡಲು ನಟಿ ರಿಯಾ ಚಕ್ರವರ್ತಿಗೆ ಯೋಗ್ಯತೆ ಇಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಬಳಿಕ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದರು. ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು ಬಿಹಾರಕ್ಕೆ ದೊಡ್ಡ ಜಯ ಎಂದು ಬಣ್ಣಿಸಿದ್ದರು.

1987ರಿಂದ ಐಪಿಎಸ್ನಲ್ಲಿದ್ದ ಪಾಂಡೆ
1987ರಿಂದ ಐಪಿಎಸ್ನಲ್ಲಿದ್ದ ಅವರು ಕಳೆದ ವರ್ಷ ಬಿಹಾರ ಡಿಜಿಪಿಯಾಗಿ ನೇಮಕವಾಗಿದ್ದರು.
2014ರ ಲೋಕಸಭೆ ಚುನಾವಣೆಗೂ ಮುನ್ನ ಕೂಡ ಪಾಂಡೆ ಅವರು ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಕ್ಸರ್ ಲೋಕಸಭೆ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ವಿಆರ್ಎಸ್ ಹಿಂಪಡೆದಿದ್ದರು. ವಿಆರ್ಎಸ್ ಪಡೆಯಲು ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಇರಬೇಕೆಂಬ ನಿಯಮವನ್ನು ಸರ್ಕಾರ ಸಡಿಲಿಸಿರುವುದರಿಂದ ಪಾಂಡೆ ಅವರ ಮನವಿಯನ್ನು ಬೇಗ ಅಂಗೀಕರಿಸಲಾಗಿದೆ.

2021ರ ಫೆಬ್ರವರಿ 28ರಂದು ನಿವೃತ್ತರಾಗಬೇಕಿತ್ತು
ಪಾಂಡೆ ಅವರು 2021ರ ಫೆಬ್ರವರಿ 28ರಂದು ನಿವೃತ್ತರಾಗಬೇಕಿತ್ತು. 2012ರಲ್ಲಿ ಮುಜಫ್ಫರ್ಪುರ ಜಿಲ್ಲೆಯ ತಿರ್ಹುತ್ನ ಐಜಿಪಿಯಾಗಿದ್ದ ಸಂದರ್ಭದಲ್ಲಿ 12 ವರ್ಷದ ಬಾಲಕಿ ನವ್ರುನಾ ಚಕ್ರವರ್ತಿ ಎಂಬಾಕೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಅವರು ವಿಚಾರಣೆಗೆ ಒಳಪಟ್ಟಿದ್ದರು. ಜುಲೈನಲ್ಲಿ ನಿವೃತ್ತರಾದ ಮತ್ತೊಬ್ಬ ಐಪಿಎಸ್ ಅಧಿಕಾರಿ ಸುನಿಲ್ ಕುಮಾರ್ ಕೂಡ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.












Click it and Unblock the Notifications