'ನನ್ನ ತಂದೆಗೆ ಚಿಕಿತ್ಸೆ ಸಿಗದಂತೆ ಮಾಡೋದು ಮಾನವ ಹಕ್ಕು ಉಲ್ಲಂಘನೆ'
ಪಾಟ್ನಾ (ಬಿಹಾರ), ಏಪ್ರಿಲ್ 7: ರಾಂಚಿ ಆಸ್ಪತ್ರೆಯಲ್ಲಿ ಲಾಲೂ ಪ್ರಸಾದ್ ಯಾದವ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ತಂದೆಯನ್ನು ಭೇಟಿಯಾದಲು ಬಿಜೆಪಿ ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಆರೋಪ ಮಾಡಿದ್ದಾರೆ. ಬಿಹಾರ ವಿಧಾನಸಭೆಯ ವಿಪಕ್ಷ ನಾಯಕ ತೇಜಸ್ವಿ, ಬಿಜೆಪಿ ಸರಕಾರವನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ.
ನನ್ನ ತಂದೆ ಲಾಲೂ ಪ್ರಸಾದ್ ಯಾದವ್ ವಿರುದ್ಧ ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. "ನಿನ್ನೆ ಸಂಜೆಯಿಂದ ರಾಂಚಿ ಆಸ್ಪತ್ರೆಯಲ್ಲಿ ನನ್ನ ತಂದೆಯನ್ನು ಭೇಟಿ ಆಗಲು ಕಾಯುತ್ತಿದ್ದೇನೆ. ಆದರೆ ಸರ್ವಾಧಿಕಾರಿ ಬಿಜೆಪಿಯು ಒಬ್ಬ ಮಗನಿಗೆ ತಂದೆಯನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲಾಲೂ ಜೀ ವಿರುದ್ಧ ಅವರು ಪಿತೂರಿ ನಡೆಸುತ್ತಿದ್ದಾರೆ. ಅವರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಕೊಠಡಿ ಮೇಲೆ ಪದೇಪದೇ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಬಹು ಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್, ರಾಂಚಿಯ ರಾಜೇಂದ್ರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ನನ್ನ ತಂದೆಗೆ ಕೆಲವು ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ವೈದ್ಯರು ಹೇಳಿದ್ದಾರೆ. ಆದರೆ ಮತ್ತೊಂದು ಕಟ್ಟಡಕ್ಕೆ ವೈದ್ಯಕೀಯ ಪರೀಕ್ಷೆಗೆ ತೆರಳಬೇಕಾದ ಅವರಿಗೆ ಪೊಲೀಸರು ಭದ್ರತೆ ಒದಗಿಸುತ್ತಿಲ್ಲ. ಇದು "ಮಾನವ ಹಕ್ಕುಗಳ ಉಲ್ಲಂಘನೆ" ಎಂದು ತೇಜಸ್ವಿ ಹೇಳಿದ್ದಾರೆ.
"ಎರಡು ವಾರಗಳ ಹಿಂದೆ ವೈದ್ಯರು ಲಾಲೂ ಜೀಗೆ ಎಕೋಕಾರ್ಡಿಯೋಗ್ರಫಿ ಹಾಗೂ ಎಕ್ಸ್-ರೇ ಮಾಡಿಸುವಂತೆ ಜೈಲು ಅಧಿಕಾರಿಗಳಿಗೆ ಹೇಳಿದ್ದರು. ಆ ಪರೀಕ್ಷೆಗಾಗಿ ಮತ್ತೊಂದು ಕಟ್ಟಡಕ್ಕೆ ತೆರಳಬೇಕಾದ ಅವರಿಗೆ ಭದ್ರತೆ ಒದಗಿಸಬೇಕು. ಆ ಭದ್ರತೆ ಒದಗಿಸದೆ ಈಗಲೂ ಆಗಿಲ್ಲ. ಇದು ಅನ್ಯಾಯ. ಇದು ಮಾನವ ಹಕ್ಕುಗಳ ಉಲ್ಲಂಘನೆ" ಎಂದು ಮತ್ತೊಂದು ಪೋಸ್ಟ್ ನಲ್ಲಿ ತೇಜಸ್ವಿ ಯಾದವ್ ಬರೆದುಕೊಂಡಿದ್ದಾರೆ.












Click it and Unblock the Notifications