ಮುಜಾಫರ್ಪುರದಲ್ಲಿ ಉಲ್ಬಣಗೊಂಡ ಮೆದುಳು ಜ್ವರ, 108 ಮಕ್ಕಳು ಸಾವು
ಪಾಟ್ನಾ, ಜೂನ್ 18: ಬಿಹಾರದಲ್ಲಿ ಮೆದುಳು ಜ್ವರ ಅಕ್ಯೂಟ್ ಎನ್ಸೆಫಾಲಿಟೀಸ್ ಸಿಂಡ್ರೋಮ್ ಉಲ್ಬಣಗೊಂಡಿದ್ದು ಒಟ್ಟು 108 ಮಕ್ಕಳು ಮೃತಪಟ್ಟಿದ್ದಾರೆ. ಶ್ರೀ ಕೃಷ್ಣ ಕಾಲೇಜೊಂದರಲ್ಲೇ 83ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 108ಕ್ಕೇರಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ಮುಜಾಫರ್ನಗರ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಅನಾರೋಗ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಿಂದ ಮೆದುಳು ಜ್ವರ ಬರುತ್ತದೆ. ಅತಿಯಾದ ಜ್ವರ, ದೇಹ ಸೆಳೆತ ಮತ್ತು ತಲೆನೋವು ಈ ರೋಗದ ಲಕ್ಷಣಗಳಾಗಿವೆ. ಇದು ವೈರಲ್ ಫೀವರ್ ಆಗಿದೆ.

ಬಿಹಾರದಲ್ಲಿ ಒಂದೆಡೆ ಮೆದುಳು ಜ್ವರದಿಂದ ಸತ್ತವರ ಸಂಖ್ಯೆ 108 ಕ್ಕೆ ಏರಿದರೆ, ಮತ್ತೊಂದೆಡೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ಶನಿವಾರ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಗಯಾ, ಅರುಂಗಾಬಾದ್, ನಾವಡಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಿಂದಾಗಿ ಜನರು ಸಾವನ್ನಪ್ಪಿದ್ದರು. ಅಲ್ಲಿನ ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕವಾಗಿತ್ತು.
ಬಿಹಾರ ಸಿಎಂ ನಿತೀಶ್ ಕುಮಾರ್ ಮೆದುಳು ಜ್ವರದಿಂದ ಸತ್ತವರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಸಮಸ್ಯೆಯನ್ನು ಎದುರಿಸುವುದು ಹೇಗೆ ಎಂಬ ಅರಿವು ಜನರಲ್ಲಿ ಇಲ್ಲ, ಜಾಗೃತಿಯ ಕೊರತೆಯಿಂದಾಗಿ ರೋಗ ಮತ್ತಷ್ಟು ಉಲ್ಭಣವಾಗುತ್ತಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದರು. ಲಿಚಿ ಹಣ್ಣಿನಲ್ಲಿರುವ ಹಾನಿಕಾರಕ ಅಂಶವೂ ಈ ಜ್ವರಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.












Click it and Unblock the Notifications