ಮುಸ್ಲಿಮರಲ್ಲಿ ಸಂತಾನಶಕ್ತಿ ಹೆಚ್ಚು; ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕನ ಹೇಳಿಕೆ
ಪಾಟ್ನಾ, ಫೆಬ್ರವರಿ 24: ಬಿಹಾರ ಬಿಜೆಪಿ ಶಾಸಕ ಹರಿ ಭೂಷಣ್ ಮುಸ್ಲಿಂ ಜನಾಂಗದ ಬಗ್ಗೆ ಮಾತನಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. "ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಸಂತಾನಶಕ್ತಿ ಪ್ರಮಾಣ ಹೆಚ್ಚು" ಎಂದು ಹರಿಭೂಷಣ್ ಠಾಕೂರ್ ಹೇಳಿಕೆ ನೀಡಿರುವುದು ವಿವಾದ ಹುಟ್ಟುಹಾಕಿದೆ.
"ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಸಂತಾನಶಕ್ತಿ ಹೆಚ್ಚು. ಅವರು ಭಾರತವನ್ನು ಇಸ್ಲಾಮ್ ಆಗಿ ಬದಲಾಯಿಸಲು ಬಯಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್, ಈಚೆಗೆ ವಿಧಾನಸಭೆಯಲ್ಲಿ, ರಾಜ್ಯದಲ್ಲಿ ಜನಸಂಖ್ಯೆ ಕುರಿತು ಮಾತನಾಡುವಾಗ, ಸಂತಾನಶಕ್ತಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿದ್ದು, ಇದಕ್ಕೆ ಹರಿಭೂಷಣ್ ಠಾಕೂರ್ ಈ ಹೇಳಿಕೆ ನೀಡಿದ್ದಾರೆ. ಬಿಹಾರದ ಹಿಂದೂಗಳಲ್ಲಿ ಸಂತಾನಶಕ್ತಿ ಕಡಿಮೆಯಾಗಿದೆ, ಮುಸ್ಲಿಮರಲ್ಲಲ್ಲ ಎಂದು ಹೇಳಿರುವ ಅವರು, ಈ ಜನಸಂಖ್ಯೆ ಹೆಚ್ಚಳವನ್ನು ತಡೆಯಲು ಕಾನೂನು ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು. ಇಲ್ಲಿನ ಸಂಪನ್ಮೂಲಗಳು ಕಡಿಮೆಯಾಗಿವೆ. ಆದರೆ ಕೆಲವರು ಜನಸಂಖ್ಯೆ ಬೆಳೆಸುತ್ತಲೇ ಇದ್ದಾರೆ. ಇಡೀ ದೇಶವನ್ನು ಇಸ್ಲಾಮಿಕ್ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಜೆಡಿಯು ಮುಸ್ಲಿಂ ಮುಖಂಡರ ಬಗ್ಗೆಯೂ ಮಾತನಾಡಿ, "ರಾಷ್ಟ್ರ ಮೊದಲು. ಆನಂತರ ಧರ್ಮ. ಆದರೆ ಕೆಲವರಿಗೆ ಧರ್ಮ ಮೊದಲಾಗಿದೆ, ರಾಷ್ಟ್ರ ಆನಂತರದ ವಿಷಯವಾಗಿದೆ. ಅವರಲ್ಲಿ ದೇಶಾಭಿಮಾನದ ಭಾವನೆಯೇ ಇಲ್ಲವಾಗಿದೆ" ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡನ ಹೇಳಿಕೆ ಕುರಿತು ಎಐಎಂಐಎಂ ಶಾಸಕ ಅಖ್ತರ್ ಉಲ್ ಇಮಾನ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕರ ಈ ಹೇಳಿಕೆ ಅಸಾಂವಿಧಾನಕವಾದದ್ದು ಹಾಗೂ ಸಮಾಜವನ್ನು ಒಡೆಯುವಂಥದ್ದು. ಫಲವತ್ತತೆಗೂ ಧರ್ಮಕ್ಕೂ ಸಂಬಂಧವಿಲ್ಲ. ಇದು ಬಡತನ ಹಾಗೂ ಅನಕ್ಷರತೆಗೆ ಸಂಬಂಧಿಸಿದ್ದು ಎಂದು ದೂರಿದ್ದಾರೆ.












Click it and Unblock the Notifications