ಆರ್ಜೆಡಿ ಗೆದ್ದರೆ ಬಿಹಾರ ಉಗ್ರರ ಆಶ್ರಯ ತಾಣವಾಗುತ್ತದೆ: ವಿವಾದ ಸೃಷ್ಟಿಸಿದ ಕೇಂದ್ರ ಸಚಿವ
ಪಟ್ನಾ, ಅಕ್ಟೋಬರ್ 14: ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆರ್ಜೆಡಿ ಅಧಿಕಾರಕ್ಕೆ ಬಂದರೆ ಬಿಹಾರವು ಉಗ್ರರ ಆಶ್ರಯ ತಾಣವಾಗಲಿದೆ ಎನ್ನುವ ಮೂಲಕ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ನಿತ್ಯಾನಂದ ರೈ ವಿವಾದ ಸೃಷ್ಟಿಸಿದ್ದಾರೆ.
'ರಾಷ್ಟ್ರೀಯ ಜನತಾ ದಳವು (ಆರ್ಜೆಡಿ) ಈ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದರೆ ಕಾಶ್ಮೀರದಲ್ಲಿರುವ ಉಗ್ರರು ತಪ್ಪಿಸಿಕೊಂಡು ಬಂದು ಬಿಹಾರದಲ್ಲಿ ಆಶ್ರಯ ಪಡೆಯುತ್ತಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ವೈಶಾಲಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದಾರೆ.
ಸಮಷ್ಟಿಪುರ ಜಿಲ್ಲೆಯ ಉಜಿಯರ್ಪುರ ಕ್ಷೇತ್ರದ ಲೋಕಸಭೆ ಸದಸ್ಯರಾದ ನಿತ್ಯಾನಂದ ರೈ ನೀಡಿರುವ ಹೇಳಿಕೆ ತೀವ್ರ ವಿವಾದ ಉಂಟುಮಾಡಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಜೆಂಡಾಗಳನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
'ಬಿಹಾರದಲ್ಲಿ ಶೇ 46.6ರಷ್ಟು ನಿರುದ್ಯೋಗ ಪ್ರಮಾಣವಿದೆ. ಅವರು ನಿರುದ್ಯೋಗದ ಭಯೋತ್ಪಾದನೆ, ಬಡತನ, ಹಸಿವು ಮತ್ತು ವಲಸೆಯ ಬಗ್ಗೆ ಏನು ಹೇಳುತ್ತಾರೆ? ಅವರ ಡಬಲ್ ಎಂಜಿನ್ ಸರ್ಕಾರ 15 ವರ್ಷ ಏನು ಮಾಡಿದೆ? ಇದು ಚುನಾವಣಾ ಕಾರ್ಯಸೂಚಿಗಳಿಂದ ಗಮನ ಬೇರೆಡೆ ತಿರುಗಿಸಲು ಅವರು ಮಾಡುತ್ತಿರುವ ಪ್ರಯತ್ನ. ಆದರೆ ನಾವು ಅಜೆಂಡಾದಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ' ಎಂದು ತೇಜಸ್ವಿ ಹೇಳಿದ್ದಾರೆ.
'ನಿತ್ಯಾನಂದ ಅವರ ಹೇಳಿಕೆಯಿಂದ ಪ್ರತಿ ಬಿಹಾರಿಗಳಿಗೂ ಬೇಸರ ಹಾಗೂ ನೋವಾಗಿದೆ. ಅವರ ಹೇಳಿಕೆಯು ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ' ಎಂದು ಆರ್ಜೆಡಿ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಹೇಳಿದ್ದಾರೆ.












Click it and Unblock the Notifications