Breaking: ಸುಶಾಂತ್ ಸಿಂಗ್ ಕೇಸ್: ಸಿಬಿಐಗೆ ಶಿಫಾರಸು ಮಾಡಿದ ಬಿಹಾರ ಸಿಎಂ
ಪಾಟ್ನಾ, ಆಗಸ್ಟ್ 04: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಕೊನೆಗೂ ಸಿಬಿಐ ಪ್ರವೇಶ ಖಚಿತವಾಗಿದೆ. ಮುಂಬೈ ಪೊಲೀಸರು ಬಿಹಾರ ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಬಿಹಾರ ಸರ್ಕಾರ ಈ ಕೇಸ್ ಸಿಬಿಐಗೆ ವರ್ಗಾಯಿಸಲು ಮುಂದಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ್ ಖುದ್ದು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮುಂಬೈ ಮತ್ತು ಪಾಟ್ನಾ ಎರಡು ಕಡೆ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ. ಪಾಟ್ನಾದಲ್ಲಿ ಸುಶಾಂತ್ ಸಿಂಗ್ ತಂದೆ ಅವರು, ರಿಯಾ ಚಕ್ರವರ್ತಿ ಸೇರಿದಂತೆ ಆರು ಜನರ ವಿರುದ್ಧ ದೂರು ನೀಡಿದ್ದಾರೆ.

ಈ ದೂರಿನ ಅನ್ವಯ ಪಾಟ್ನಾ ಪೊಲೀಸರು ಮುಂಬೈಗೆ ತೆರಳಿ ತನಿಖೆ ನಡೆಸಿದ್ದರು. ಆದರೆ, ತನಿಖೆಗೆಂದು ಮುಂಬೈಗೆ ತೆರಳಿದ್ದು ಪಾಟ್ನಾ ಐಪಿಎಸ್ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಬಲವಂತವಾಗಿ ಕ್ವಾರಂಟೈನ್ ಮಾಡಿತು.
ಇದರಿಂದ ಸಹಜವಾಗಿ ಆಕ್ರೋಶಗೊಂಡ ಬಿಹಾರ ಪೊಲೀಸ್ ಆಯುಕ್ತ, ಬಹಿರಂಗವಾಗಿ ಮುಂಬೈ ಪೊಲೀಸರ ಅಸಹಕಾರವನ್ನು ಹೊರಹಾಕಿದ್ದರು. ಮುಂಬೈ ಪೊಲೀಸರು ತನಿಖೆಗೆ ಸಹಕರಿಸಿಲ್ಲ, ಎಫ್ ಐ ಆರ್ ಸೇರಿದಂತೆ ಅಗತ್ಯ ದಾಖಲೆಗಳ ಮಾಹಿತಿ ಸಹ ನಮಗೆ ನೀಡಿಲ್ಲ ಎಂದು ಆರೋಪಿಸಿದರು.
ಮತ್ತೊಂದೆಡೆ ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಮಹಾರಾಷ್ಟ್ರ ಬಿಜೆಪಿ ಸೇರಿದಂತೆ ಹಲವರು ಆಗ್ರಹಿಸಿದರು. ಆದರೆ, ಮಹಾರಾಷ್ಟ್ರ ಸರ್ಕಾರ ಅದಕ್ಕೆ ಸಮ್ಮತಿ ನೀಡಲಿಲ್ಲ. ಮುಂಬೈ ಪೊಲೀಸರು ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿ ಸಿಬಿಐ ತನಿಖೆ ನಿರಾಕರಣೆ ಮಾಡಿತ್ತು.
ಮುಂಬೈ ಪೊಲೀಸರ ವರ್ತನೆಯನ್ನು ಖಂಡಿಸಿದ ಬಿಹಾರ ಸರ್ಕಾರ, ಈಗ ಸಿಬಿಐ ತನಿಖೆಗೆ ಒಪ್ಪಿಗೆ ಸೂಚಿಸಿದೆ.












Click it and Unblock the Notifications