ಬಿಹಾರ ಚುನಾವಣೆ: ಕೊರೊನಾ ವೈರಸ್ನಿಂದ ಬಂಡಾಯ ಅಭ್ಯರ್ಥಿ ಸಾವು
ಪಟ್ನಾ, ನವೆಂಬರ್ 7: ಬಿಹಾರದಲ್ಲಿ ವಿಧಾನಸಭೆಯ ಮೂರನೇ ಹಾಗೂ ಕೊನೆಯ ಹಂತದ ಚುನಾವಣೆ ಪ್ರಗತಿಯಲ್ಲಿರುವಾಗಲೇ ಅಭ್ಯರ್ಥಿಯೊಬ್ಬರು ಕೋವಿಡ್ನಿಂದ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.
ಮಧುಬನಿಯ ಬೆನಿಪಟ್ಟಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿದ್ದ ನೀರಜ್ ಕುಮಾರ್ ಝಾ ಮೃತ ದುರ್ದೈವಿ. ಅವರು ಕೊರೊನಾ ವೈರಸ್ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನೀರಜ್ ಝಾ ಅವರು, ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರಿಂದ ಪಟ್ನಾದಲ್ಲಿರು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಜೆಡಿಯು ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದ ನೀರಜ್ ಝಾ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿತೀಶ್ ಕುಮಾರ್ ಪಕ್ಷದಿಂದ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು, ಸ್ವತಂತ್ರವಾಗಿ ಸ್ಪರ್ಧಿಸಿದ್ದರು.

ನೀರಜ್ ಝಾ ಅವರು ಕೋವಿಡ್ನಿಂದ ಪಾತ್ರವಲ್ಲದೆ, ಸುದೀರ್ಘ ಸಮಯದಿಂದ ಮಧುಮೇಹದಿಂದ ಕೂಡ ಬಳಲುತ್ತಿದ್ದರು. ಅವರಿಗೆ ವೈದ್ಯರ ತಂಡ ನಿರಂತರ ಚಿಕಿತ್ಸೆ ನೀಡುತ್ತಿತ್ತು ಎಂದು ಏಮ್ಸ್ನ ಕೊರೊನಾ ನೋಡಲ್ ಅಧಿಕಾರಿ ಡಾ. ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಬೆನಿಪಟ್ಟಿ ಕ್ಷೇತ್ರದಲ್ಲಿ ಜನಪ್ರಿಯ ಜೆಡಿಯು ನಾಯಕರಾಗಿದ್ದ ಅವರು ಪಕ್ಷದ ಮೇಲಿನ ಮುನಿಸಿನಿಂದ ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ನಿತೀಶ್ ಸರ್ಕಾರದಲ್ಲಿ ಸಚಿವರಾಗಿರುವ ಬಿಜೆಪಿ ಅಭ್ಯರ್ಥಿ ವಿನೋದ್ ನಾರಾಯಣ್ ಝಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭಾವನಾ ಝಾ ಮುಖಾಮುಖಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಭಾವನಾ ಝಾ, ವಿನೋದ್ ನಾರಾಯಣ್ ಅವರನ್ನು ಸೋಲಿಸಿದ್ದರು. ಆದರೆ ಪರಿಷತ್ಗೆ ಆಯ್ಕೆಯಾಗಿದ್ದ ವಿನೋದ್ ಸಚಿವ ಸ್ಥಾನ ಪಡೆದಿದ್ದರು.
ಈ ಕ್ಷೇತ್ರದಲ್ಲಿ ಜೆಡಿಯು ಟಿಕೆಟ್ ಸಿಗಲಿದೆ ಎಂದು ನಿರೀಕ್ಷಿಸಿದ್ದ ನೀರಜ್ ಅವರಿಗೆ ನಿರಾಶೆಯಾಗಿತ್ತು. ಜೆಡಿಯು ಈ ಕ್ಷೇತ್ರವನ್ನು ಬಿಜೆಪಿ ಕೋಟಾಕ್ಕೆ ಬಿಟ್ಟುಕೊಟ್ಟಿತ್ತು. ಇದರಿಂದ ಕೋಪಗೊಂಡಿದ್ದ ನೀರಜ್ ಬಂಡಾಯವೆದ್ದಿದ್ದರು.












Click it and Unblock the Notifications