ಗಂಗಾ ನದಿಗೆ ಶವಗಳನ್ನು ಎಸೆದಿದ್ದು ಅಂಬ್ಯುಲೆನ್ಸ್ ಚಾಲಕರು
ಪಾಟ್ನಾ, ಮೇ 11; ಗಂಗಾ ನದಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದ ಗಡಿಭಾಗದಲ್ಲಿ ಮಂಗಳವಾರ ಸಹ ಹಲವಾರು ಶವಗಳು ಪತ್ತೆಯಾಗಿವೆ. ಬಿಹಾರದಲ್ಲಿ ಸೋಮವಾರದಿಂದ ಸುಮಾರು 71 ಶವಗಳು ಪತ್ತೆಯಾಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಅಂಬ್ಯುಲೆನ್ಸ್ ಚಾಲಕರು ಸೇತುವೆ ಬಳಿಯಿಂದ ಶವಗಳನ್ನು ನದಿಗೆ ಎಸೆಯುತ್ತಿರುವ ವಿಡಿಯೋಗಳು ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರ ಸರ್ಕಾರ ಇದಕ್ಕೆ ಉತ್ತರ ಪ್ರದೇಶವೇ ಕಾರಣ ಎಂದು ಆರೋಪಿಸಿದೆ.
ಬಿಹಾರದ ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್, "ಜಯಪ್ರಭು ಸೇತು ಮೇಲಿಂದ ಅಂಬ್ಯುಲೆನ್ಸ್ ಚಾಲಕರು ಶವಗಳನ್ನು ನದಿಗೆ ಎಸೆದಿದ್ದಾರೆ" ಎಂದು ಆರೋಪಿಸಿದ್ದಾರೆ.

"ಬಕ್ಸರ್ ಜಿಲ್ಲೆಯ ಜಿಲ್ಲಾಡಳಿತ ಸೇತುವೆ ಬಳಿ ಭದ್ರತೆ ನಿಯೋಜಿಸಬೇಕು. ಇದರಿಂದಾಗಿ ಶವಗಳನ್ನು ನದಿಗೆ ಎಸೆಯದಂತೆ ತಡೆಯಬಹುದು" ಎಂದು ಜಿಲ್ಲಾಡಳಿತವನ್ನು ಸಂಸದರು ಒತ್ತಾಯಿಸಿದ್ದಾರೆ.
ಸೋಮವಾರ ಬಿಹಾರದ ಚೌಸಾ ಪ್ರದೇಶದಲ್ಲಿ ಕೋವಿಡ್ ಸೋಂಕಿತರದ್ದು ಎಂದು ಹೇಳಲಾದ ಶವಗಳು ಪತ್ತೆಯಾಗಿದ್ದವು. ಈ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹಲವು ಶವಗಳಿಗೆ ಕೋವಿಡ್ ಸೋಂಕು ತಗುಲಿಲ್ಲ ಎಂದು ಬಳಿಕ ಸ್ಪಷ್ಟಪಡಿಸಲಾಗಿತ್ತು.
ಅಂತ್ಯ ಸಂಸ್ಕಾರದ ವೆಚ್ಚ ಅಧಿಕವಾಗಿದೆ. ಆದ್ದರಿಂದ ಜನರು ಶವಗಳನ್ನು ನದಿಗೆ ಎಸೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು ಆದರೆ ಅಂತ್ಯಸಂಸ್ಕಾರಕ್ಕೆ ಯಾವುದೇ ಸಮಸ್ಯೆಗಳು ಇಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಗಂಗಾ ನದಿಯಲ್ಲಿ ಶವಗಳು ಪತ್ತೆಯಾದ ಪ್ರಕರಣದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ನಡುವೆ ಆರೋಪಕ್ಕೆ ಕಾರಣವಾಗಿದೆ. ಬಿಹಾರದ ಸಚಿವ ಸಂಜಯ್ ಕುಮಾರ್ ಝಾ, ಘಟನೆ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications