ಮೋದಿ ಭಾಷಣಕ್ಕೂ ಮುನ್ನ ಪಾಟ್ನಾದಲ್ಲಿ ಸ್ಫೋಟ ಪ್ರಕರಣ: ನಾಲ್ವರಿಗೆ ಮರಣದಂಡನೆ
ಪಾಟ್ನಾ, ನವೆಂಬರ್ 2: 2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಪ್ರಕರಣದ ಇತರ ಐದು ಅಪರಾಧಿಗಳ ಪೈಕಿ ಇಬ್ಬರಿಗೆ ಜೀವಾವಧಿ ಶಿಕ್ಷೆ, ಇಬ್ಬರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಒಬ್ಬಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಮಾಡುವ ಮುನ್ನ ಸ್ಪೋಟ ಸಂಭವಿಸಿ ಆರು ಮಂದಿ ಮೃತಪಟ್ಟು, 89 ಮಂದಿ ಗಾಯಗೊಂಡಿದ್ದರು.
ಅಕ್ಟೋಬರ್ 27, 2013 ರಂದು, ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು 2014 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಪ್ರಧಾನಿ ಮೋದಿ ಅವರು ಉದ್ದೇಶಿಸಿ ಮಾತನಾಡಲಿದ್ದ "ಹುಂಕಾರ್ ರ್ಯಾಲಿ" ಸ್ಥಳವಾದ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಸ್ಫೋಟಗಳು ಸಂಭವಿಸಿದವು. ಮೋದಿ ಆಗಮಿಸುವ ಮುನ್ನವೇ ಈ ಸ್ಫೋಟಗಳು ಸಂಭವಿಸಿದ್ದವು. ಮಾತ್ರವಲ್ಲದೆ ಗಾಂಧಿ ಮೈದಾನದಲ್ಲಿ ಸ್ಫೋಟಕ್ಕೂ ಮುನ್ನ ಪಾಟ್ನಾ ರೈಲು ನಿಲ್ದಾಣದಲ್ಲೂ ಸ್ಫೋಟ ಸಂಭವಿಸಿತ್ತು.
ನಿಷೇಧಿತ ವಿದ್ಯಾರ್ಥಿಗಳ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಮತ್ತು ಅದರ ಹೊಸ ಅವತಾರವಾದ ಇಂಡಿಯನ್ ಮುಜಾಹಿದೀನ್ನ ರಾಂಚಿ ಮಾಡ್ಯೂಲ್ನಿಂದ ಸ್ಫೋಟಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ತನಿಖೆ ನಂತರ ಬಹಿರಂಗವಾಗಿದೆ. ಕಳೆದ ವಾರ, ವಿಶೇಷ ಎನ್ಐಎ ನ್ಯಾಯಾಲಯ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ 10 ಆರೋಪಿಗಳಲ್ಲಿ ಒಂಬತ್ತು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತು. ಸಾಕ್ಷ್ಯಾಧಾರಗಳ ಕೊರತೆಯಿಂದ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.
ಈ ಪ್ರಕರಣದಲ್ಲಿ ಇಮ್ತಿಯಾಜ್ ಅನ್ಸಾರಿ, ಮುಜಿಬುಲ್ಲಾ, ಹೈದರ್ ಅಲಿ, ಫಿರೋಜ್ ಅಸ್ಲಾಂ, ಒಮರ್ ಅನ್ಸಾರಿ, ಇಫ್ತೆಕರ್, ಅಹ್ಮದ್ ಹುಸೇನ್, ಉಮೈರ್ ಸಿದ್ದಿಕಿ ಮತ್ತು ಅಜರುದ್ದೀನ್ ಅವರನ್ನು ದೋಷಿಗಳೆಂದು ಘೋಷಿಸಲಾಗಿದ್ದು, ಒಬ್ಬ ಫಕ್ರುದ್ದೀನ್ ಎಂಬಾತನನ್ನು ಖುಲಾಸೆಗೊಳಿಸಲಾಗಿತ್ತು.
ಎನ್ಐಎ ವಕೀಲರು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಲಲನ್ ಪ್ರಸಾದ್ ಸಿಂಗ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದು, ಸಂಸ್ಥೆಯು 11 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಅವರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದು, ಅವರ ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ಕಳುಹಿಸಲಾಗಿದೆ. ಉಳಿದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.
ಏನಿದು ಘಟನೆ?:
ಅಕ್ಟೋಬರ್ 27, 2013 ರಂದು ಬಿಹಾರದ ರಾಜಧಾನಿಯನ್ನು ನಡೆದ ಸರಣಿ ಸ್ಫೋಟಗಳು ಜನರನ್ನು ಬೆಚ್ಚಿ ಬೀಳಿಸಿದ್ದವು. ಸ್ಪೋಟದ ತೀವ್ರತೆಗೆ ಆರು ಜನರು ಮೃತಪಟ್ಟು ಕಾಲ್ತುಳಿತಕ್ಕೆ ಸಿಲುಕಿ 90 ಕ್ಕೂ ಹೆಚ್ಚು ಜನರು ಗಾಯಗೊಂಡರು. ನಂತರ, ಎನ್ಐಎ ನವೆಂಬರ್ 6, 2013 ರಂದು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತು. 11 ಆರೋಪಿಗಳ ವಿರುದ್ಧ ಆಗಸ್ಟ್ 21, 2014 ರಂದು ಚಾರ್ಜ್ ಶೀಟ್ ಸಲ್ಲಿಸಿತು. ಈ ಹಿಂದೆ ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ದೆಹಲಿಗಳಲ್ಲಿ ಮೋದಿ ರ್ಯಾಲಿಗಳಲ್ಲಿ ಅವರ ಬಳಿ ಹೋಗಲು ವಿಫಲವಾದದ್ದರಿಂದ ಪಾಟ್ನಾದಲ್ಲಿ ಸ್ಫೋಟ ನಡೆಸಲು ಆಪರಾಧಿಗಳು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
9 ಮಂದಿ ಇಂಡಿಯನ್ ಮುಜಾಹಿದೀನ್ (IM) ಶಂಕಿತರು ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಅನ್ನು ಪ್ರಕರಣದಲ್ಲಿ ಅಪರಾಧಿಗಳೆಂದು ತೀರ್ಪು ನೀಡಲಾಗಿತ್ತು. ಜೊತೆಗೆ ಅಪರಾಧಿಗಳನ್ನು ನುಮಾನ್ ಅನ್ಸಾರಿ, ಹೈದರ್ ಅಲಿ ಅಲಿಯಾಸ್ "ಬ್ಲ್ಯಾಕ್ ಬ್ಯೂಟಿ", ಮೊಹಮ್ಮದ್ ಮುಜಿಬುಲ್ಲಾ ಅನ್ಸಾರಿ, ಉಮರ್ ಸಿದ್ದಿಕಿ, ಅಜರುದ್ದೀನ್ ಖುರೇಷಿ, ಅಹ್ಮದ್ ಹುಸೇನ್, ಫಕ್ರುದ್ದೀನ್, ಮೊಹಮ್ಮದ್ ಇಫ್ತೆಕರ್ ಆಲಂ ಮತ್ತು ಮತ್ತೊಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದ್ದು, ಆತನ ಗುರುತನ್ನು ಗೌಪ್ಯವಾಗಿಡಲಾಗಿತ್ತು. ಇನ್ನೂ ಒಬ್ಬ ಆರೋಪಿ ತಾರಿಖ್ ಅನ್ಸಾರಿ ಪಾಟ್ನಾದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಇಡಲು ಪ್ರಯತ್ನಿಸುತ್ತಿದ್ದಾಗ ಮೃತಪಟ್ಟಿದ್ದರು. ಬಂಧನದ ಬಳಿಕ ಅಪರಾಧಿಗಳನ್ನು ಪಾಟ್ನಾ ಜೈಲಿನಲ್ಲಿ ಇರಿಸಲಾಗಿದೆ.