ಗೋವಾ; ಬಿಜೆಪಿ ಹಸಿರು ನಿಶಾನೆಗಾಗಿ ಕಾದು ಕೂತ ಉತ್ಪಲ್ ಪರಿಕ್ಕರ್!
ಪಣಜಿ, ಜನವರಿ 13; ಕೇಂದ್ರ ಚುನಾವಣಾ ಆಯೋಗ ಗೋವಾ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯ ಹಸಿರು ನಿಶಾನೆಗಾಗಿ ಕಾಯುತ್ತಿದ್ದಾರೆ.
ಉತ್ಪಲ್ ಪರಿಕ್ಕರ್ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗಾಗಿ ಹಲವಾರು ಆಕಾಂಕ್ಷಿಗಳಿದ್ದಾರೆ.
ಗೋವಾ ಚುನಾವಣೆ; ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?
ಸೋಮವಾರ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಮೈಕಲ್ ಲೋಬೊ ಕಾಂಗ್ರೆಸ್ ಸೇರಿದ್ದಾರೆ. ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, "ಗೋವಾದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಪರಂಪರೆಯನ್ನು ಬಿಜೆಪಿ ಮರೆತಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಗೋವಾ ಚುನಾವಣೆ; ಮಹತ್ವದ ಸಭೆ ನಡೆಸಿದ ದೇವೇಂದ್ರ ಫಡ್ನವೀಸ್
ಇದಕ್ಕೆ ಪುಷ್ಠಿ ನೀಡುವಂತೆ ಉತ್ಪಲ್ ಪರಿಕ್ಕರ್ಗೆ ಬಿಜೆಪಿ ಟಿಕೆಟ್ ನೀಡಲು ಪಕ್ಷ ವಿಳಂಬ ಮಾಡುತ್ತಿದೆ. 2019ರಲ್ಲಿ ಮೇನಲ್ಲಿ ಮನೋಹರ್ ಪರಿಕ್ಕರ್ ನಿಧನರಾದ ಬಳಿಕ ಪಣಜಿ ಕ್ಷೇತ್ರ ತೆರವಾಗಿತ್ತು. ಆಗ ಉಪ ಚುನಾವಣೆ ನಡೆದಾಗಲೇ ಉತ್ಪಲ್ ಪರಿಕ್ಕರ್ ಸ್ಪರ್ಧಿಸಲು ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್ ನೀಡಲಿಲ್ಲ.
ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಉಪ ಚುನಾವಣೆಯಲ್ಲಿ ಸಿದ್ಧಾರ್ಥ್ ಕುನ್ಸಿಲಿಯೆಂಕರ್ಗೆ ಟಿಕೆಟ್ ನೀಡಿತು. ಆದರೆ ಕಾಂಗ್ರೆಸ್ನ ಅಟನಸಿಯೋ ಮೊನ್ನೆರ್ರೇಟ್ 1,758 ಮತಗಳ ಅಂತರಿಂದ ಸಿದ್ಧಾರ್ಥ್ ಕುನ್ಸಿಲಿಯೆಂಕರ್ಗೆ ಸೋಲುಣಿಸಿದರು.
ಈ ಮೂಲಕ 1994ರ ನಂತರ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. ಈಗಲೂ ಸಹ ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುವ ನೀರಿಕ್ಷೆಯಲ್ಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಬಿಜೆಪಿ ನಾಯಕರಿಂದ ಟಿಕೆಟ್ ಸಿಗುವ ಯಾವುದೇ ಸೂಚನೆ ಸಿಕ್ಕಿಲ್ಲ. ಮತ್ತೊಂದು ಕಡೆ ಶಿವಸೇನೆ ನಾಯಕ ಸಂಜಯ್ ರಾವತ್, "ಉತ್ಪಲ್ ಪರಿಕ್ಕರ್ ಮುಖ್ಯಮಂತ್ರಿ ಅಭ್ಯರ್ಥಿ ಆಗುವುದಾದರೆ ಪಕ್ಷ ಬೆಂಬಲ ನೀಡಲಿದೆ" ಎಂದು ಹೇಳಿಕೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಗೋವಾದ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಎರಡು ದಿನಗಳಿಂದ ರಾಜ್ಯದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಗುರುವಾರ ಸಹ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸಹ ಪಾಲ್ಗೊಂಡಿದ್ದರು.
ದೇವೇಂದ್ರ ಫಡ್ನವೀಸ್ ಮಾತನಾಡಿ, "ಬಿಜೆಪಿ ಯಾವುದೇ ಅಭ್ಯರ್ಥಿಗೆ ಅವರು ನಾಯಕರ ಮಕ್ಕಳು ಎಂಬ ಕಾರಣಕ್ಕೆ ಟಿಕೆಟ್ ನೀಡುವುದಿಲ್ಲ" ಎಂದು ಹೇಳಿದ್ದಾರೆ. ಈ ಮೂಲಕ ಉತ್ಪಲ್ ಪರಿಕ್ಕರ್ಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬ ಸುಳಿವು ಕೊಟ್ಟಿದ್ದಾರೆ.
ಉತ್ಪಲ್ ಪರಿಕ್ಕರ್ ಗೋವಾ ರಾಜಧಾನಿ ಪಣಜಿ ಕ್ಷೇತ್ರದಿಂದಲೇ ಟಿಕೆಟ್ ಬಯಸಿದ್ದಾರೆ. ತಂದೆ ಅದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು ಎಂಬ ಅಂಶ ಇದರ ಹಿಂದೆ ಅಡಗಿದೆ. 1994ರಲ್ಲಿ ಮನೋಹರ್ ಪರಿಕ್ಕರ್ ಮೊದಲ ಬಾರಿಗೆ ಪಣಜಿಯಲ್ಲಿ ಗೆದ್ದಿದ್ದರು. 2014ರ ತನಕ ಕ್ಷೇತ್ರದಲ್ಲಿ ಗೆಲವು ಸಾಧಿಸಿದರು. ಬಳಿಕ ಕೇಂದ್ರ ರಕ್ಷಣಾ ಸಚಿವರಾಗಿ ನೇಮಕಗೊಂಡರು. 2018ರ ಚುನಾವಣೆಯಲ್ಲಿ ಅವರು ಪುನಃ ಪಣಜಿಯಲ್ಲಿ ಗೆವುಲು ಸಾಧಿಸಿದರು. ಆದರೆ 2019ರ ಉಪ ಚುನಾವಣೆಯಲ್ಲಿ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.
ಕೆಲವು ತಿಂಗಳ ಹಿಂದೆ ಉತ್ಪಲ್ ಪರಿಕ್ಕರ್ ದೇವೇಂದ್ರ ಫಡ್ನವೀಸ್ ಭೇಟಿಯಾಗಿದ್ದರು. ಆಗ ಅವರು, "ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡುವಂತೆ" ಸ್ನೇಹಯುತವಾಗಿ ಸಲಹೆ ನೀಡಿದ್ದರು. ಆದರೆ ಈಗಿನ ಪರಿಸ್ಥಿತಿಯೇ ಬೇರೆಯಾಗಿದೆ, ಚುನಾವಣೆ ಘೋಷಣೆಯಾಗಿದೆ.
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.