ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್
ಪಣಜಿ, ಮಾರ್ಚ್ 18: ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರ ಪಾರ್ಥೀವ ಶರೀರಕ್ಕೆ ಮಿರಾಮರ್ ಕಡಲ ತೀರದಲ್ಲಿ ಅಗ್ನಿಸ್ಪರ್ಶ ಮಾಡಿ, ಅಂತ್ಯ ಸಂಸ್ಕಾರ ನೇರವೇರಿಸುವ ವೇಳೆ ಇತ್ತ ಹೊಸ ಮುಖ್ಯಮಂತ್ರಿ ಆಯ್ಕೆಯಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಗೋವಾದ ಸ್ಪೀಕರ್ ಪ್ರಮೋದ್ ಸಾವಂತ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು
ಮಹಾರಾಷ್ಟ್ರವಾದಿ ಗೋಮಂತ ಪಾರ್ಟಿ(ಎಂಜಿಪಿ)ಯ ಸುಧಿನ್ ಧವಳಿಕರ್ ಹಾಗೂ ಗೋವಾ ಫಾರ್ವರ್ಡ್ ಫ್ರಂಟ್ (ಜಿಎಫ್ ಪಿ)ಯ ವಿಜಯ್ ಸರ್ದೇಸಾಯಿ ಅವರು ಉಪ ಮುಖ್ಯಮಂತ್ರಿಗಳಾಗಿರುತ್ತಾರೆ. ಮೂವರು ಕೂಡಾ ಇಂದು ರಾತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಾವಿನ ಪಕ್ಕದಲ್ಲೇ ಕೂತು ಕೊನೆಯ ಬಾರಿ ಫೈಲ್ ಗೆ ಸಹಿ ಮಾಡಿದ್ದ ಪರಿಕ್ಕರ್!
ಗೋವಾಕ್ಕೆ ತೆರಳಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಪ್ರಮೋದ್ ಸಾವಂತ್ ಅವರನ್ನೇ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದೆ ಎನ್ನಲಾಗಿದೆ.
ಪ್ರಮೋದ್ ಸಾವಂತ್ ಗೆ ಆರೆಸ್ಸೆಸ್ ಬೆಂಬಲ
ಸಾವಂತ್ ಗೆ ಆರೆಸ್ಸೆಸ್ ಬೆಂಬಲವೂ ಇದೆ. ಈ ಹಿಂದೆ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರನ್ನು ಭೇಟಿಯಾಗಿ ಬಂದ ಬಳಿಕವೇ ಸಾವಂತ್ ಅವರ ಹೆಸರು ಮೊದಲ ಬಾರಿಗೆ ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು. ಸಾವಂತ್ ಅವರು ವೃತ್ತಿಯಿಂದ ಆಯುರ್ವೇದ ವೈದ್ಯರಾಗಿದ್ದಾರೆ. ಇವರ ಪತ್ನಿ ಸುಲಕ್ಷಣಾ ಅವರು ಕೆಮಿಸ್ಟ್ರಿ ಟೀಚರ್ ಆಗಿದ್ದು, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ. ಮಾರ್ಚ್ 22,2017ರಿಂದ ಗೋವಾ ಅಸೆಂಬ್ಲಿ ಸ್ಪೀಕರ್ ಅಗಿದ್ದರೆ. ಉತ್ತರ ಗೋವಾದ ಸಂಕ್ವಲಿಮ್ ಕ್ಷೇತ್ರದ ಜನಪ್ರತಿನಿಧಿಯಾಗಿದ್ದಾರೆ.
ಗೋವಾ ವಿಧಾನಸಭೆ ಶಾಸಕರ ಬಲಾಬಲ
ಗೋವಾ ವಿಧಾನಸಭೆ ಶಾಸಕರ ಬಲಾಬಲ ಒಟ್ಟು 40, ಹಾಲಿ ಬಲಾಬಲ 37: ಮ್ಯಾಜಿಕ್ ನಂಬರ್ : 19 ಬಿಜೆಪಿ : 12 ಗೋವಾ ಫಾರ್ವಡ್: 3 ಎಂಜಿಪಿ: 3 ಎನ್ ಸಿಪಿ : 1 ಪಕ್ಷೇತರರು : 2 ಬಿಜೆಪಿ ಪ್ಲಸ್ : 21 ಕಾಂಗ್ರೆಸ್ : 14
17 ಶಾಸಕರ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿ, ಆಡಳಿತ ನಡೆಸುತ್ತಿದೆ.
ಹಲವಾರು ನಾಯಕರ ಹೆಸರು ಕೇಳಿ ಬಂದಿತ್ತು
ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾವ್ ಜಿ ರಾಣೆ ಅವರ ಪುತ್ರ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೆಸರು ಕೂಡಾ ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು. ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಅವರ ಹೆಸರು ಕೂಡಾ ರೇಸ್ ನಲ್ಲಿತ್ತು. ಕಾಂಗ್ರೆಸ್ ಸಂಸದ ಶಾಂತರಾಮ್ ನಾಯ್ಕ್ ಅವರನ್ನು ಸೋಲಿಸಿ ಏಕೈಕ ರಾಜ್ಯಸಭಾ ಸದಸ್ಯರಾಗಿ 2017ರಲ್ಲಿ ವಿನಯ್ ಅವರು ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಗೋವಾ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ ಅನುಭವವುಳ್ಳವಾಗಿದ್ದಾರೆ. ಕಾಂಗ್ರೆಸ್ ಶಾಸಕ, ಮಾಜಿ ಸಿಎಂ ದಿಗಂಬರ್ ಕಾಮತ್ ಅವರು ಬಿಜೆಪಿ ಸೇರಿ ಸಿಎಂ ಆಗುವ ಸುದ್ದಿಯನ್ನು ವಿನಯ್ ಅಲ್ಲಗೆಳೆದಿದ್ದಾರೆ. ಅತ್ತ ದಿಗಂಬರ್ ಕಾಮತ್ ಕೂಡಾ ಬಿಜೆಪಿ ಸೇರಿದರೆ ಅದು 'ರಾಜಕೀಯ ಆತ್ಮಹತ್ಯೆ' ಎಂದಿದ್ದಾರೆ.
ಕಾಂಗ್ರೆಸ್ಸಿನಿಂದ ವಿಫಲ ಯತ್ನ
ಫೆಬ್ರವರಿ 2017ರ ನಂತರ ಕಾಂಗ್ರೆಸ್ಸಿನಿಂದ ಮೂವರು ಶಾಸಕರು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಹುಮತ ಸಾಬೀತುಪಡಿಸಲು ಕನಿಷ್ಠ 21 ಸ್ಥಾನವಾದ್ರೂ ಬೇಕು. ಡಿಸೋಜಾ ಸಾವು ಮತ್ತು ಸುಭಾಷ್ ಶಿರೋಡ್ಕರ್, ದಯಾ ನಂದ್ ಸೊಪ್ಟೆ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ, ಸದನದ ಒಟ್ಟು ಸಂಖ್ಯಾಬಲ 40ರಿಂದ 37ಕ್ಕೆ ಇಳಿದಿದೆ. ಹೇಗಾದರೂ ಕಾಂಗ್ರೆಸ್ಸಿಗೆ ಕನಿಷ್ಠ 4+5 ಸ್ಥಾನಗಳ ಕೊರತೆ ಕಂಡು ಬರುತ್ತದೆ. ಗೋವಾ ಫಾರ್ವರ್ಡ್ ಫ್ರಂಟ್, ಎಂಜಿಪಿಯ ಒಂದಿಬ್ಬರು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ್ದಂತೆ ಯತ್ನಿಸಿ ವಿಫಲವಾಗಿದೆ. ಕಳೆದ ಒಂದೂವರೆ ವರ್ಷದಿಂದ ಬಿಜೆಪಿ ಸರ್ಕಾರ ಉರುಳಿಸಲು ಯತ್ನಿಸುತ್ತಿದೆ. ರಾಜ್ಯಪಾಲರಾದ ಮೃದುಲಾ ಸಿನ್ಹಾ ವಿರುದ್ಧವೂ ಕಿಡಿಕಾರುತ್ತಿದೆ.