ಮನೋಹರ್ ಪರಿಕ್ಕರ್ ರಾಜೀನಾಮೆಗೆ ಮುಹೂರ್ತ ನಿಗದಿ?
Recommended Video

ಪಣಜಿ, ನವೆಂಬರ್ 28: ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ರಾಜೀನಾಮೆಗೆ ಬಿಜೆಪಿ ಮುಹೂರ್ತ ನಿಗದಿ ಮಾಡಿದೆಯಾ?
ಕೆಲವು ಮೂಲಗಳ ಪ್ರಕಾರ ಪಂಚ ರಾಜ್ಯಗಳ ಚುನಾವಣೆಯ ನಂತರ ಗೋವಾ ಮುಖ್ಯಮಂತ್ರಿಯನ್ನೂ ಬದಲಿಸಲು ಬಿಜೆಪಿ ನಿರ್ಧರಿಸಿದೆ. ಪ್ಯಾಂಕ್ರಿಯಾಸ್ ಸಂಬಂಧೀ ಕಾಯಿಲೆಯಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್ ಅವರಿಗೆ ಆಡಳಿತದಲ್ಲಿ ಗಮನ ನೀಡಲು ಸಾಧ್ಯವಾಗದ ಕಾರಣ ಅವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ಮನೋಹರ್ ಪರಿಕ್ಕರ್ ಅವರಿಗಿರುವ ಜನಪ್ರಿಯತೆ ಮತ್ತು ರಾಜಕೀಯ ಅನುಭವದಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸ್ವತಃ ಬಿಜೆಪಿ ಹೈಕಮಾಂಡೇ ಮೀನಮೇಷ ಎಣಿಸುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸ್ವತಃ ಪರಿಕ್ಕರ್ ಅವರಿಗೇ ಇಷ್ಟವಿಲ್ಲ ಎನ್ನಲಾಗುತ್ತಿದೆ.

ಪರಿಕ್ಕರ್ ರಾಜೀನಾಮೆಗೆ ಮುಹೂರ್ತ ನಿಗದಿ
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ, ಮಿಜೋರಾಂ ಈ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದ್ದು, ಆ ನಂತರ ಪರಿಕ್ಕರ್ ಅವರ ರಾಜೀನಾಮೆ ಪಡೆಯಲು ಬಿಜೆಪಿ ನಿರ್ಧರಿಸಿದೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬ ಆಧಾರದ ಮೇಲೆ ಗೋವಾಕ್ಕೆ ಮುಂದಿನ ಸಮರ್ಥ ನಾಯಕ ಯಾರಾಗಲಿದ್ದಾರೆ ಎಂಬ ಬಗ್ಗೆಯೂ ಬಿಜೆಪಿ ಚಿಂತಿಸಲಿದೆ.

ರಾಜೀನಾಮೆಗೆ ತುದಿಗಾಲಲ್ಲಿ ಕಾಯುತ್ತಿರುವ ಪರಿಕ್ಕರ್!
ಮನೋಹರ್ ಪರಿಕ್ಕರ್ ಅವರು ರಾಜೀನಾಮೆಗೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಇಷ್ಟವಿಲ್ಲ. ಅದೇ ಕಾರಣಕ್ಕೆ ತಾವು ವಹಿಸಿಕೊಂಡಿದ್ದ ಖಾತೆಗಳ ಜವಾಬ್ದಾರಿಯಿಂದಲೂ ಪರಿಕ್ಕರ್ ಹೊರಬಂದಿದ್ದಾರೆ. ಆದರೆ ಬಿಜೆಪಿ ಹೈಕಮಾಂಡೇ ಸಾಧ್ಯವಾದಷ್ಟು ದಿನ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುತ್ತಿದೆ. ಅದಕ್ಕೆ ಕಾರಣ ಪರಿಕ್ಕರ್ ಅವರಿಗಿರುವ ಜನಪ್ರಿಯತೆ.

ರಾಜೀನಾಮೆಗೆ ಪಟ್ಟು
ಬಿಜೆಪಿಯ ಆಂತರಿಕ ಯೋಜನೆಗಳ ಬಗ್ಗೆ ತಿಳಿಯದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಪರಿಕ್ಕರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಅವರ ನಿವಾಸದ ಮುಂದೆ ಇತ್ತೀಚೆಗಷ್ಟೆ ಬೃಹತ್ ಪ್ರತಿಭಟನೆ ನಡೆಸಿದ್ದವು.ಈ ಹೋರಾಟಕ್ಕೆ ಒಂದಾನೊಂದು ಕಾಲದಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಶಿವಸೇನೆಯೂ ಬೆಂಬಲ ಸೂಚಿಸಿದ್ದು ವಿಶೇಷ.

ಪರಿಕ್ಕರ್ ನಂತರ ಯಾರು?
ಪರಿಕ್ಕರ್ ರಾಜೀನಾಮೆ ನೀಡಿದ ನಂತರ ಗೋವಾ ಮುಖ್ಯಮಂತ್ರಿಯಾಗುವವರು ಯಾರು? ಹಾಗೆ ಹೇಳುವುದಕ್ಕೆ ಹೋದರೆ ಈ ಸ್ಥಾನಕ್ಕಾಗಿ ದೊಡ್ಡ ರೇಸ್ ಇದೆ! ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಪುತ್ರ ವಿಶ್ವಜಿತ್ ರಾಣೆ, ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ದಯಾನಂದ್ ಸಾಪ್ಟೆ(ಮಾಜಿ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದವರು) ಅವರ ಹೆಸರು ಸಿಎಂ ರೇಸ್ ನಲ್ಲಿ ಕೇಳಿಬರುತ್ತಿದೆ. ಜೊತೆಗೆ ಪ್ರಸ್ತುತ ಗೋವಾ ಸ್ಪೀಕರ್ ಆಗಿರುವ ಡಾ.ಪ್ರಮೋದ್ ಸಾವಂತ್ ಅವರ ಹೆಸರೂ ಮುಖ್ಯಮಂತ್ರಿ ಗಾದಿಯಲ್ಲಿ ಕೇಳಿಬರುತ್ತಿದೆ.

ಪರಿಕ್ಕರ್ ಅವರಿಗಿರುವ ಆರೋಗ್ಯ ಸಮಸ್ಯೆ ಏನು?
ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಮನೋಹರ್ ಪರಿಕ್ಕರ್ ಅವರು, ಗೋವಾದ ಜನಪ್ರಿಯ ಮುಖ್ಯಮಂತ್ರಿ. ಆದರೆ ಕಳೆದ ವರ್ಷ ಪ್ಯಾಂಕ್ರಿಯಾಸ್ ಸಂಬಂಧೀ ಕಾಯಿಲೆಗೆ ತುತ್ತಾದ ಅವರ ಆರೋಗ್ಯ ಹದಗೆಟ್ಟಿದೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ.











Click it and Unblock the Notifications