ಗೋವಾದಲ್ಲಿ ಅತಂತ್ರ ಫಲಿತಾಂಶದ ಮುನ್ಸೂಚನೆ: ಶಾಸಕರ ಹಿಡಿತಕ್ಕೆ ಮುಂದಾದ ಕಾಂಗ್ರೆಸ್
ಗೋವಾ, ಮಾ.10: ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಮುಂದಾಗಿದೆ.
40 ವಿಧಾನಸಭಾ ಕ್ಷೇತ್ರದ ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತೀವ್ರ ಪೈಪೋಟಿ ನಡೆಸಿವೆ. ಮತದಾನೋತ್ತರ ಸಮೀಕ್ಷೆ ಪ್ರಕಾರ ಗೋವಾದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಇದಲ್ಲದೆ ಅತಂತ್ರ ಫಲಿತಾಂಶ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಬೀಡು ಬಿಟ್ಟ ಕಾಂಗ್ರೆಸ್ ನಾಯಕರು:
ಗೋವಾದಲ್ಲಿ ಕಳೆದ ಬಾರಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಎಲ್ಲ ಪ್ರಮುಖ ನಾಯಕರನ್ನು ಗೋವಾಕ್ಕೆ ಕಳುಹಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎರಡು ದಿನಗಳ ಹಿಂದೆಯೇ ಗೋವಾಕ್ಕೆ ತೆರಳಿದ್ದಾರೆ. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನು ಎಐಸಿಸಿ ವೀಕ್ಷಕ ಪಿ. ಚಿದಂಬರಂ, ವೀಕ್ಷಕ ಸತೀಶ್ ಜಾರಕಿಹೊಳಿ ಸಹಿತ ಎಲ್ಲರೂ ಗೋವಾದ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ಶಾಸಕರ ಸಭೆ:
ಪಿ. ಚಿದಂಬರಂ, ಡಿ.ಕೆ. ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಸಹಿತಿ ಹಲವು ನಾಯಕರು ಬುಧವಾರ ರಾತ್ರಿ ಮಡಗಾಂವ್ನಲ್ಲಿ ಗೋವಾದ ಹಾಲಿ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಗೋವಾ ವಿಧಾನಸಭೆ ಪ್ರತಿಪಕ್ಷ ನಾಯಕ ದಿಗಂಬರ ಕಾಮತ್, ಸುನೀಲ್, ಅಲೆಕ್ಸಿಯೋ ಸಿಕ್ವೆರಿಯೋ ಮತ್ತಿತರರು ಭಾಗವಹಿಸಿದ್ದರು.
ಗೋವಾದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಅತಂತ್ರವಾದಲ್ಲಿ ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿರಬೇಕು. ಉನ್ನತ ಮಟ್ಟದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಂಡರೂ ಅದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಗೋವಾ ಮತದಾರರು ಬದಲಾವಣೆ ಬಯಸಿದ್ದಾರೆ
'ಗೋವಾ ಮತದಾರರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರ ತರಲು ಇಚ್ಚಿಸಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕಳೆದ ಬಾರಿ ಆದ ತಪ್ಪು ಈ ಬಾರಿ ಮರುಕಳಿಸುವುದಿಲ್ಲವೇ ಎಂಬ ಪ್ರಶ್ನೆಗೆ, 'ನಮ್ಮ ಎಲ್ಲ ಸದಸ್ಯರು ಪಕ್ಷದ ಪರ ನಿಷ್ಠೆ ತೋರಿದ್ದು, ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ. ಎಲ್ಲರೂ ಒಟ್ಟಾಗಿ ಹೋರಾಡಿದ್ದು, ಪರಿಸ್ಥಿತಿಯನ್ನು ಒಟ್ಟಾಗಿ ನಿಭಾಹಿಸುತ್ತೇವೆ' ಎಂದರು.
ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಸಿಎಂ ಅವರ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಅನ್ಯ ಪಕ್ಷದ ಹಾಗೂ ಆ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.












Click it and Unblock the Notifications