ಕಾಂಗ್ರೆಸ್ ತೊರೆದ ಗೋವಾ ಶಾಸಕ, ಬಿಜೆಪಿ ಸೇರ್ಪಡೆ ಸಾಧ್ಯತೆ
ಪಣಜಿ, ಡಿಸೆಂಬರ್ 07: ಚುನಾವಣೆ ಹೊಸ್ತಿಲಲ್ಲೇ ಗೋವಾದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಪಕ್ಷ ತೊರೆದಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನ ನಾಯಕ, ಗೋವಾದ ಮಾಜಿ ಸಿಎಂ ರವಿ ನಾಯ್ಕ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಬದಲಾವಣೆಯಾಗಿರುವುದು ಮಹತ್ವ ಪಡೆದುಕೊಂಡಿದೆ. ರವಿ ನಾಯ್ಕ್ ಪುತ್ರರೂ ಈಗ ಬಿಜೆಪಿಯಲ್ಲಿದ್ದು ನನ್ನ ಮುಂದಿನ ನಡೆ ಏನೆಂಬುದನ್ನು ಶೀಘ್ರವೇ ತಿಳಿಸುತ್ತೇನೆ ಎಂದು ರವಿ ನಾಯ್ಕ್ ಹೇಳಿದ್ದಾರೆ.
ಗೋವಾ ಚುನಾವಣೆ; ಹಲವು ಪದಾಧಿಕಾರಿಗಳನ್ನು ನೇಮಿಸಿದ ಕಾಂಗ್ರೆಸ್
ಶಾಸಕ ಸ್ಥಾನಕ್ಕೂ ರವಿ ನಾಯ್ಕ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಗೋವಾದ ಮತ್ತೋರ್ವ ಮಾಜಿ ಸಿಎಂ ಲೂಯ್ಜಿನ್ಹೋ ಫಲೆರಿಯೋ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಟಿಎಂಸಿ ಸೇರ್ಪಡೆಗೊಂಡಿದ್ದರು.
ನಾಯ್ಕ್ ರಾಜೀನಾಮೆ ಮೂಲಕ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ನ ಶಾಸಕರ ಸಂಖ್ಯೆ ಮೂರಕ್ಕೆ ಇಳಿದಿದೆ. ಗೋವಾದಲ್ಲಿ ಪೋಂಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರವಿ ನಾಯ್ಕ್ ಸ್ಪೀಕರ್ ರಾಜೇಶ್ ಪಟ್ನೇಕರ್ ರಾಜೀನಾಮೆ ಸಲ್ಲಿಸಿದ್ದಾರೆ.
2017ರ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಬಿಜೆಪಿ ಗೋವಾದ ಎಂಜಿಪಿ ಸೇರಿ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿತ್ತು. ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದಾಗ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯ ಸುಧಿನ್ ಧವಲೀಕರ್ ಅವರ ಕ್ಯಾಬಿನೆಟ್ನಲ್ಲಿ ಸಚಿವರಾಗಿದ್ದರು.
2019ರ ಮಾರ್ಚ್ನಲ್ಲಿ ಅವರು ಮೃತಪಟ್ಟ ನಂತರ ಪ್ರಮೋದ್ ಸಾವಂತ್ ಸಿಎಂ ಆದರು. ಅದಾದ ಬಳಿಕ ಸುಧಿನ್ರನ್ನು ಸಂಪುಟದಿಂದ ಕೈಬಿಡಲಾಗಿತ್ತು. 2017ರ ಚುನಾವಣೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು. ಬಿಜೆಪಿ ಜತೆ ಮೈತ್ರಿ ತೊರೆದರೂ ಕೂಡ ಈ ಪಕ್ಷದ ಇನ್ನಿಬ್ಬರು ಎಂಎಲ್ಎಗಳು ಬಿಜೆಪಿ ಸೇರಿದ್ದು, ಈಗ ಉಳಿದವರು ಸುಧಿನ್ ಧವಲೀಕರ್ ಒಬ್ಬರೇ ಆಗಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್ ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನನಗೆ ಗೋವಾ ಅಧಿಕಾರ ಹಿಡಿಯಬೇಕು ಎಂಬ ಆಸೆ ಖಂಡಿತ ಇಲ್ಲ. ಆದರೆ ಬಿಜೆಪಿಯನ್ನು ಗೆಲ್ಲಲು ಬಿಡಬಾರದು ಎಂಬುದೇ ನನ್ನ ಉದ್ದೇಶ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಈಗಾಗಲೇ ಒಮ್ಮೆ ಗೋವಾ ಪ್ರವಾಸಕ್ಕೆ ಹೋಗಿ, ಅಲ್ಲಿನ ಮೀನುಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಈಗ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಟಿಎಂಸಿ ಹಾದಿ ಇನ್ನಷ್ಟು ಸುಗಮಗೊಳ್ಳಲಿದೆ. ಈ ಮಧ್ಯೆ ಗೋವಾದಲ್ಲಿ ಮಾಜಿ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಕೂಡ ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಮುಂಬರುವ ಗೋವಾ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಟು ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಹಲವಾರು ಬದಲಾವಣೆ ಮಾಡಿದೆ. 2022ರ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಹಿರಿಯ ಉಪಾಧ್ಯಕ್ಷ, 10 ಉಪಾಧ್ಯಕ್ಷರು ಮತ್ತು 19 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಎಂ. ಕೆ. ಶೈಖ್ ನೂತನ ಹಿರಿಯ ಉಪಾಧ್ಯರಾಗಿದ್ದಾರೆ. ಮೂವರು ವಕ್ತಾರರನ್ನು ಸಹ ನೇಮಿಸಲಾಗಿದೆ.
ರಾಜ್ಯದ ಕಾಂಗ್ರೆಸ್ ಘಟಕವನ್ನು ಅಧ್ಯಕ್ಷ ಗಿರೀಶ್ ಚೋಡಾನಕರ್ ಅವರೇ ಮುನ್ನಡೆಸಲಿದ್ದಾರೆ. ಉಳಿದಂತೆ 34 ಕಾರ್ಯದರ್ಶಿಗಳು, 21 ಕಾರ್ಯಕಾರಿ ಸಮಿತಿ ಸದಸ್ಯರು, 19 ವಿಶೇಷ ಆಹ್ವಾನಿತರನ್ನು ನೇಮಕ ಮಾಡಲಾಗಿದೆ.
ಸ್ಕ್ರೀನಿಂಗ್ ಕಮಿಟಿ; ಗೋವಾ ವಿಧಾನಸಭೆಗೆ ಈಗಾಗಲೇ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ನೇಮಕ ಮಾಡಿದೆ. ರಜನಿ ಪಾಟೀಲ್ ಕಮಿಟಿ ಅಧ್ಯಕ್ಷರಾಗಿದ್ದು, ಹೈಬಿ ಈಡನ್ ಮತ್ತು ಧ್ರುವ ನಾರಾಯಣ್ ಸದಸ್ಯರಾಗಿದ್ದಾರೆ.