ಬಿಜೆಪಿ ಸೇರಲು 40 ಕೋಟಿ ರುಪಾಯಿ ಆಫರ್: ಗೋವಾ ಕಾಂಗ್ರೆಸ್ ನಾಯಕನ ಸ್ಫೋಟಕ ಹೇಳಿಕೆ
ಪಣಜಿ, ಜುಲೈ 11: ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷದಿಂದ ಸಂಪರ್ಕ ಕಡಿದುಕೊಂಡಿರುವ ಬೆನ್ನಲ್ಲೇ ಗೋವಾದ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಗಿರೀಶ್ ಚೋಡಂಕರ್ ಬಿಜೆಪಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರಲು ಕಾಂಗ್ರೆಸ್ ಶಾಸಕರಿಗೆ 40 ಕೋಟಿ ರುಪಾಯಿ ಆಫರ್ ನೀಡಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಗೋವಾದಲ್ಲಿ ಸದ್ಯದ ರಾಜಕೀಯ ಬೆಳವಣಿಗೆ ಪ್ರಕಾರ ಕನಿಷ್ಟ 5 ರಿಂದ 6 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಚೋಡಂಕರ್ ಮಾತನಾಡಿ, ಕೈಗಾರಿಕೋದ್ಯಮಿಗಳು ಮತ್ತು ಕಲ್ಲಿದ್ದಲು ಮಾಫಿಯಾದಿಂದ ಕಾಂಗ್ರೆಸ್ ಶಾಸಕರಿಗೆ ಕರೆಗಳು ಬರುತ್ತಿವೆ. ಇವರನ್ನು ಸಂಪರ್ಕಿಸಿದ ಕೆಲವು ಶಾಸಕರು ಕಾಂಗ್ರೆಸ್ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರ ಬಳಿ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ಚೋಡಂಕರ್ ಹೇಳಿದ್ದಾರೆ.
ಗೋವಾದಲ್ಲೂ ನಡೆಯುತ್ತಿದ್ಯಾ 'ಆಪರೇಷನ್ ಕಮಲ': ಬಿಜೆಪಿ ಲೆಕ್ಕಾಚಾರ ಏನು?
ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ರಾಜ್ಯ ಕಾಂಗ್ರೆಸ್ ಕಟುವಾಗಿ ನಿರಾಕರಿಸುತ್ತಿದ್ದರೂ, ಬಹುತೇಕ ಶಾಸಕರು ಪಕ್ಷದ ಸಭೆ ಮತ್ತು ಪತ್ರಿಕಾಗೋಷ್ಠಿಗೆ ಗೈರಾಗಿದ್ದರು. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಕೂಡ ಕಾಂಗ್ರೆಸ್ ಹಿರಿಯ ನಾಯಕರ ಬಗ್ಗೆಯೇ ಅಸಮಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ನ ಮೈಕೆಲ್ ಲೋಬೊ, ದಿಗಂಬರ್ ಕಾಮತ್ ಬಿಜೆಪಿಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಮೈಕೆಲ್ ಲೋಬೋರನ್ನು ಪ್ರತಿಪಕ್ಷ ನಾಯಕನ ಸ್ಥಾನದಿಂದ ತೆಗೆದುಹಾಕಿದ್ದೇವೆ ಎಂದು ಹೇಳಿದ್ದರು.
ಆರೋಪದಲ್ಲಿ ಹುರುಳಿಲ್ಲ ಎಂದ ಬಿಜೆಪಿ
ಆದರೆ, ಬಿಜೆಪಿಯು ಚೋಡಂಕರ್ ಆರೋಪಗಳನ್ನು ತಳ್ಳಿಹಾಕಿದೆ, ಅದರ ರಾಜ್ಯಾಧ್ಯಕ್ಷ ಸದಾನಂದ್ ತಾನವಡೆ ಮಾತನಾಡಿ "ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಹಣ ನೀಡುತ್ತಿರುವ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ನಾಯಕರು ಯಾವಗಲೂ ಹೀಗೆ ಸುಮ್ಮನೆ ಆರೋಪಗಳನ್ನು ಮಾಡುತ್ತಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ನಲ್ಲಿನ ಗೊಂದಲಕ್ಕೂ ಗೋವಾ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಮತ್ತು ಈ ವಿಷಯದಲ್ಲಿ ನಾವು ನಮ್ಮ ಪಕ್ಷದಿಂದ ಏನನ್ನೂ ಕೇಳಿಲ್ಲ" ಎಂದು ಅವರು ಹೇಳಿದರು.
ವದಂತಿ ತಳ್ಳಿಹಾಕಿದ ಮೇಕೆಲ್ ಲೋಬೋ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ಶಾಸಕ ಮೈಕೆಲ್ ಲೋಬೋ ವದಂತಿಗಳನ್ನು ತಳ್ಳಿ ಹಾಕಿದರು. "ವಿಧಾನಸಭಾ ಅಧಿವೇಶನಕ್ಕೆ ಮುಂಚಿತವಾಗಿ ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡಲಾಗಿದೆ" ಎಂದು ಆರೋಪಿಸಿದರು.
"ಇವೆಲ್ಲ ವದಂತಿಗಳು. ಅಂತಹದ್ದೇನೂ ಇಲ್ಲ. ಅಧಿವೇಶನ ಪ್ರಾರಂಭವಾಗುತ್ತಿದೆ ಮತ್ತು ಯಾರೋ ಸುಮ್ಮನೆ ವದಂತಿಯನ್ನು ಹರಡಿದ್ದಾರೆ. ನನಗೆ ಕೇಳಿದ್ದರೆ ನಾನು ಮೊದಲೇ ಉತ್ತರಿಸುತ್ತಿದ್ದೆ," ಎಂದು ಅವರು ಹೇಳಿದರು.
ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಈಗ ಟಿಎಂಸಿ ವಕ್ತಾರ
ಬಿಜೆಪಿಯನ್ನು ದೂರಿದ ಗೋವಾ ಕಾಂಗ್ರೆಸ್ ಅಧ್ಯಕ್ಷ
ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್, "ಬಿಜೆಪಿ ವದಂತಿಗಳನ್ನು ಸೃಷ್ಟಿಸುವ ಮೂಲಕ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನ 11 ಶಾಸಕರಲ್ಲಿ ಎಂಟು ಮಂದಿ ಹೊಸಬರು. ಸೋಮವಾರ ಸದನದಲ್ಲಿ ಸಭೆ ಇತ್ತು, ನಮ್ಮ ಹಿರಿಯ ಶಾಸಕರು ಚರ್ಚೆ ನಡೆಸಿದ್ದಾರೆ. ಹೊಸ ಶಾಸಕರು, ಸೋಮವಾರದಿಂದ ಉತ್ತಮ ಜನಾಡಳಿತ ನೀಡುವ ಬಿಜೆಪಿ ಸರ್ಕಾರದ ವಿರುದ್ಧ ದನಿಯೆತ್ತಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಊಹಾಪೋಹಕ್ಕೆ ಕಾರಣವಾಗಿದ್ದು ಸಿ.ಟಿ.ರವಿ ಹೇಳಿಕೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಮೇ ತಿಂಗಳಿನಲ್ಲಿ, ಪ್ರಸ್ತುತ 20 ಶಾಸಕರನ್ನು ಹೊಂದಿರುವ ಬಿಜೆಪಿಯು 30 ಶಾಸಕರನ್ನು ಹೊಂದಲಿದೆ ಎಂದು ಹೇಳಿಕೆ ನೀಡಿದ್ದರು. ಆಗಿನಿಂದಲೇ ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದರಾ ಎನ್ನುವ ಅನುಮಾನ ಇತ್ತು.
ಹಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಆಗಿನಿಂದಲೇ ಊಹಾಪೋಹಗಳು ಕೇಳಿಬಂದಿದ್ದವು. 20 ಶಾಸಕರ್ನು ಹೊಂದಿರುವ ಬಿಜೆಪಿ ಐವರು ಪಕ್ಷೇತರ ಶಾಸಕರ ಬೆಂಬಲದೊಂದಿದೆ ಗೋವಾದಲ್ಲಿ ಸರ್ಕಾರ ರಚನೆ ಮಾಡಿದೆ.
Recommended Video