ಕೇಜ್ರಿ ಭ್ರಷ್ಟಾಚಾರ ಸಾಬೀತಾದರೆ ರಾಜಿನಾಮೆಗೆ ಒತ್ತಾಯಿಸಿ ಧರಣಿ: ಅಣ್ಣಾ
ನವದೆಹಲಿ, ಮೇ 09 : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಸಾಬೀತಾದರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಂಗಳವಾರ ಹೇಳಿದ್ದಾರೆ.
ಕೇಜ್ರಿವಾಲ್ 2 ಕೋಟಿ ರು. ಲಂಚ ಪಡೆದಿದ್ದಾರೆ ಎಂಬ ಆರೋಪ ತುಂಬಾ ಬೇಸರ ತರಿಸಿದೆ ಹಾಗೂ ನನ್ನನ್ನು ಮೂಕನಾಗಿಸಿದೆ ಎಂದು ಕೇಜ್ರಿವಾಲ್ ಅವರ ಗುರು ಅಣ್ಣಾ ಹಜಾರೆ ಅವರು ವ್ಯಥೆಪಟ್ಟಿದ್ದರು.[ಶಿಷ್ಯ ಕೇಜ್ರಿವಾಲ್ ಗೆ ಬಂದಿರುವ ಸ್ಥಿತಿ ಕಂಡು ವ್ಯಥೆಪಟ್ಟ ಅಣ್ಣಾ]
ಈಗ ದೆಹಲಿ ಸಿಎಂ ವಿರುದ್ಧ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಣ್ಣಾ ಹಜಾರೆ ಅವರು, ಕೇಜ್ರಿವಾಲ್ ವಿರುದ್ಧದ ಆರೋಪಗಳ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು.
ಒಂದೊಮ್ಮೆ ಆತ ಭ್ರಷ್ಟನೆಂದು ಸಾಬೀತಾದರೆ ಆತನ ಪದುಚ್ಯತಿಯನ್ನು ಆಗ್ರಹಿಸಿ ನಾನು ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಸಚಿವ ಸತ್ಯೇಂದ್ರ ಜೈನ್ರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಸಂಪುಟದಿಂದ ವಜಾಗೊಂಡ ಕಪಿಲ್ ಮಿಶ್ರಾ ಅವರು ಆರೋಪಿಸಿದ್ದು, ಈ ಬಗ್ಗೆ ತನಿಖೆ ಆರಂಭಗೊಂಡಿದೆ.