ಬಾಂಗ್ಲಾದೇಶದವರು ಭಾರತದಲ್ಲಿ ಏಕಿರಬೇಕು? ಅಮಿತ್ ಶಾ ಪ್ರಶ್ನೆ
ನವದೆಹಲಿ, ಜುಲೈ 31: ಬಾಂಗ್ಲಾದೇಶದವರು ಭಾರತದಲ್ಲಿ ಏಕಿರಬೇಕು, ಅವರಿಗೆ ವಿರೋಧ ಪಕ್ಷಗಳು ಬೆಂಬಲ ಏಕೆ ನೀಡುತ್ತಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಖಾರವಾಗಿ ಪ್ರಶ್ನಿಸಿದ್ದಾರೆ.
ರಾಜ್ಯಸಭಾ ಕಲಾಪದಲ್ಲಿ ಅಸ್ಸಾಂ ನ ಎನ್ಸಿಆರ್ ಬಗ್ಗೆ ಆದ ಕಾವೇರಿದ ಚರ್ಚೆ ವೇಳೆ ನಡೆದು ಕಲಾಪವನ್ನು ನಾಳೆಗೆ ಮುಂದೂಡಿದ ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಅಸ್ಸಾಂ ನಲ್ಲಿ ಮೂಲ ರಾಜ್ಯದ ಜನರ ಪಟ್ಟಿಯನ್ನು ತಯಾರಿಸಿ ಬಿಡುಗಡೆ ಮಾಡಲಾಗಿದ್ದು, ಒಟ್ಟು 40 ಲಕ್ಷ ಜನರ ಹೆಸರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಈ 40 ಲಕ್ಷ ಜನರು ಅಕ್ರಮ ವಲಸಿಗರು ಎನ್ನಲಾಗುತ್ತಿದೆ. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್ ಎನ್ಸಿಆರ್ ಅನ್ನು ವಿರೋಧಿಸುತ್ತಿದೆ ಆದರೆ ರಾಜೀವ್ ಗಾಂಧಿ ಅವರ ಅಸ್ಸಾಂ ಒಪ್ಪಂದ ಸಹ ಎನ್ಸಿಆರ್ (ರಾಷ್ಟ್ರೀಯ ನಾಗರೀಕ ನೊಂದಣಿ)ಯೇ ಆಗಿತ್ತು ಎಂದು ಅಮಿತ್ ಶಾ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಬಾಂಗ್ಲಾದೇಶಿಯರೇಕೆ ನಮ್ಮಲ್ಲಿಗೆ ಬಂದು ನೆಲೆಸಬೇಕು, ಅವರು ಇಲ್ಲಿ ನೆಲೆಸುವುದರಿಂದ ಅಸ್ಸಾಂ ಜನರ ಹಕ್ಕುಗಳು ಮೊಟಕಾಗುವುದಿಲ್ಲವೇ, ವಿಪಕ್ಷಗಳು ಏಕೆ ಬಾಂಗ್ಲಾದೇಶಿಯರನ್ನು ಬೆಂಬಲಿಸುತ್ತಿದೆ ಎಂದು ಪ್ರಶ್ನಿಸಿದರು.
ಅಸ್ಸಾಂನಲ್ಲಿ ಈಗ ಬಿಡುಗಡೆ ಆಗಿರುವುದು ಎನ್ಸಿಆರ್ನ ಕರಡು ಪ್ರತಿ ಅಷ್ಟೆ, ಅದು ಅಂತಿಮ ಪ್ರತಿ ಅಲ್ಲ, ಎನ್ಸಿಆರ್ನಲ್ಲಿ ಯಾವುದೇ ಭಾರತೀಯ ಪ್ರಜೆಯ ಹೆಸರನ್ನು ಕೈಬಿಟ್ಟಿಲ್ಲ ವಿಪಕ್ಷಗಳು ಸುಮ್ಮನೆ ಗದ್ದಲ ಎಬ್ಬಿಸುತ್ತಿವೆ ಎಂದು ಅವರು ಹೇಳಿದರು.
ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ರಾಷ್ಟ್ರ ಮುಖಂಡರು ಎನ್ಸಿಆರ್ಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ವಿಪಕ್ಷಗಳು ಈ ಬಗ್ಗೆ ಭಾರಿ ಗದ್ದಲ ಎಬ್ಬಿಸಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.












Click it and Unblock the Notifications