ತಾಲಿಬಾನ್ ಜೊತೆ ಮಾತುಕತೆ ನಡೆಸಲೇಬೇಕಾದ ಅಗತ್ಯವಿದೆ; ಗುಟೆರಸ್
ನವದೆಹಲಿ, ಸೆಪ್ಟೆಂಬರ್ 10: ಆರ್ಥಿಕ ಕುಸಿತದಿಂದ ಲಕ್ಷಾಂತರ ಮಂದಿ ಸಾಯುವುದನ್ನು ತಡೆಯಲು ನಾವು ತಾಲಿಬಾನ್ ಜೊತೆ ಮಾತುಕತೆ ನಡೆಸಲೇಬೇಕಾಗಿದೆ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರಸ್ ಕರೆ ನೀಡಿದ್ದಾರೆ.
'ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಮುಂದೆ ಅಲ್ಲಿನ ಲಕ್ಷಾಂತರ ಮಂದಿ ಹಸಿವಿನಿಂದ ಸಾಯಬಹುದಾದ ಅಪಾಯವಿದೆ. ಆ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದು ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ.
'ನಾವು ತಾಲಿಬಾನ್ ಜೊತೆ ಮಾತುಕತೆ ನಡೆಸಲೇಬೇಕಾದ ಅಗತ್ಯವಿದೆ. ಮಾತುಕತೆ ವೇಳೆ ನಮ್ಮ ತತ್ವಗಳನ್ನು ತಾಲಿಬಾನ್ಗೆ ನೇರವಾಗಿ ದಾಟಿಸುವುದರೊಂದಿಗೆ ಅಫ್ಘಾನ್ ಜನರೊಂದಿಗೆ ನಾವಿದ್ದೇವೆ ಎಂಬುದನ್ನು ಅವರಿಗೆ ಖಾತ್ರಿಪಡಿಸಬೇಕಿದೆ' ಎಂದು ಅಂತರರಾಷ್ಟ್ರೀಯ ಸಮುದಾಯಗಳಿಗೆ ಕರೆ ನೀಡಿದ್ದಾರೆ.

'ಕಷ್ಟದಲ್ಲಿ ಸಿಲುಕಿರುವ ಜನರೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಸಾಯುವ ಅಪಾಯವಿದೆ. ನಮ್ಮ ಮಾತುಕತೆಯಿಂದ ಪ್ರಯೋಜನವಾಗುವುದೇ ಇಲ್ಲವೇ ಎಂಬ ಕುರಿತು ಏನೂ ಹೇಳಲು ಸಾಧ್ಯವಿಲ್ಲ. ಆದರೆ ಅಫ್ಘಾನಿಸ್ತಾನ ಭಯೋತ್ಪಾದನೆ ಕೇಂದ್ರವಾಗಬಾರದು, ಮಹಿಳೆಯರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಬಾರದು ಎಂಬುದರ ಬಗ್ಗೆ ಕಾಳಜಿ ವಹಿಸಬೇಕಿದೆ. ಈ ಹಲವು ಕಾರಣಗಳಿಂದ ತಾಲಿಬಾನ್ ಜೊತೆಗೆ ಮಾತುಕತೆ ನಡೆಸುವುದು ಅನಿವಾರ್ಯವಾಗಿದೆ' ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಅಧಿಕಾರಕ್ಕೆ ಬಂದು ನೂತನ ಸರ್ಕಾರ ರಚನೆ ಮಾಡಿದೆ.
ತಾಲಿಬಾನ್ ಅಧಿಕಾರಕ್ಕೆ ಬಂದರೂ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದನ್ನು ಜಾಗತಿಕ ಸಮುದಾಯಗಳು ಮುಂದುವರೆಸಬೇಕು. ಇಲ್ಲದೇ ಇದ್ದರೆ ಅಫ್ಘನ್ ಜನರು ಹಿಂದೆಂದೂ ಕಂಡಿರದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಗುಟೆರಸ್ ವಿಶೇಷ ಪ್ರತಿನಿಧಿ ದೆಬೋರಾ ಲಿಯೊನ್ಸ್ ಕಳವಳ ವ್ಯಕ್ತಪಡಿಸಿದ್ದರು. ಈ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಅಫ್ಘಾನಿಸ್ತಾನ ಭಾರೀ ಹೊಡೆತ ಅನುಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಅಫ್ಘಾನ್ ಆರ್ಥಿಕ ಬಿಕ್ಕಟ್ಟಿನ ಕುರಿತು UNDP ವರದಿ
ಫ್ಘಾನಿಸ್ತಾನದ 97% ಜನಸಂಖ್ಯೆಯು 2022ರ ಮಧ್ಯದ ವೇಳೆಗೆ ಬಡತನದ ಅಂಚಿನಲ್ಲಿರುತ್ತದೆ ಎಂದು ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಅಂದಾಜು ಮಾಡಿದೆ.
ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್ಡಿಪಿ ಹೇಳಿದೆ.
ಅಫ್ಘಾನಿಸ್ತಾನದ ನೈಜ ಜಿಡಿಪಿ 13.2%ನಷ್ಟು ಸಂಕುಚಿತಗೊಳ್ಳಬಹುದು ಎಂದು ಸಂಸ್ಥೆ ಅಂದಾಜಿಸಿದ್ದು, ಇದು ಬಡತನ ದರದಲ್ಲಿ 25% ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ. 'ಮಾನವೀಯ ಹಾಗೂ ಆರ್ಥಿಕ ಬಿಕ್ಕಟ್ಟಿನ ಮೇಲೆ ಸಂಪೂರ್ಣ ಅಭಿವೃದ್ಧಿ ಕುಸಿತವನ್ನು ಕಾಣಬಹುದು' ಎಂದು ಯುಎನ್ ಸಹಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಯುಎನ್ಡಿಪಿ ಏಷ್ಯಾ ಹಾಗೂ ಪೆಸಿಫಿಕ್ ಪ್ರಾದೇಶಕ ಬ್ಯೂರೋ ನಿರ್ದೇಶಕ ಕನ್ನಿ ವಿಘ್ನರಾಜ ಹೇಳಿದ್ದಾರೆ.

ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಎರಡು ದಶಕಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 31ರಂದು ಅಮೆರಿಕ ಪಡೆ ಅಫ್ಘಾನ್ ತೊರೆಯುತ್ತಿದ್ದಂತೆ ಸ್ವಾತಂತ್ರ್ಯ ಘೋಷಿಸಿಕೊಂಡಿರುವ ತಾಲಿಬಾನ್, ಹೊಸ ಸರ್ಕಾರ ರಚಿಸಿದೆ.
ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಸ್ತುತ ರಾಜಕೀಯ ಪರಿವರ್ತನೆಯಿಂದ ಉಂಟಾದ ಏರುಪೇರಿನ ಜೊತೆ ದೇಶ ಹೋರಾಡುತ್ತಿದೆ. ಇದೀಗ ಅಫ್ಘಾನಿಸ್ತಾನದಲ್ಲಿ ಆರ್ಥಿಕ ಚಟುವಟಿಕೆ, ಬಿಕ್ಕಟ್ಟಿನ ನಿರ್ವಹಣೆ ಬಹು ದೊಡ್ಡ ಸವಾಲಾಗಿದೆ.












Click it and Unblock the Notifications