ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸೈನಿಕನ ನಾಮಪತ್ರ ತಿರಸ್ಕೃತ
ನವದೆಹಲಿ, ಮೇ 01: ನರೇಂದ್ರ ಮೋದಿ ವಿರುದ್ಧ ಎಸ್-ಬಿಎಸ್ಪಿ ಅಭ್ಯರ್ಥಿಯಾಗಿ ವಾರಣಾಸಿಯಲ್ಲಿ ಕಣಕ್ಕೆ ಇಳಿದಿದ್ದ ಬಿಎಸ್ಎಫ್ ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಸೇನೆಯಿಂದ ಅಮಾನತ್ತಾಗಿರುವುದಕ್ಕೆ ಸ್ಪಷ್ಟೀಕರಣ ಹಾಗೂ ಬಿಎಸ್ಎಫ್ನಿಂದ ನಿರಪೇಕ್ಷಣಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲು ವಿಫಲರಾಗಿರುವ ಕಾರಣ ತೇಜ್ ಬಹದ್ದೂರ್ ಅವರ ನಾಮಪತ್ರವನ್ನು ಚುನಾವಣಾ ಆಯೋಗವು ರದ್ದು ಮಾಡಿದೆ.
ಮೋದಿ ವಿರುದ್ದ ಕಣದಿಂದ ಹಿಂದಕ್ಕೆ: ಅಸಲಿ ಕಾರಣ ತೆರೆದಿಟ್ಟ ಪ್ರಿಯಾಂಕ ಗಾಂಧಿ
ಯಾವುದೇ ಸರ್ಕಾರಿ ಸಿಬ್ಬಂದಿಯು ಭ್ರಷ್ಟಾಚಾರ ಹಾಗೂ ಸೈನಿಕರು ವಿಶ್ವಾಸದ್ರೋಹ ಆರೋಪದಡಿ ಸೇವೆಯಿಂದ ಅಮಾನತ್ತಾಗಿದ್ದರೆ ಅಂತಹವರು ಐದು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇದೇ ನಿಯಮದಡಿ ತೇಜ್ ಬಹದ್ದೂರ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ.
ಯೋಧರಿಗೆ ನೀಡಲಾಗುವ ಕಳಪೆ ಆಹಾರದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತೇಜ್ ಬಹದ್ದೂರ್ ಅವರು ಹರಿಬಿಟ್ಟಿದ್ದರು, ಇದರಿಂದಾಗಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಇದರ ಬಗ್ಗೆ ನಿರಪೇಕ್ಷಣಾ ಪತ್ರವನ್ನು ಸಲ್ಲಿಸುವಂತೆ ಆಯೋಗವು ಕೇಳಿತ್ತು, ಆದರೆ ತೇಜ್ ಪಾಲ್ ಅವರು ನಿರಪೇಕ್ಷಣಾ ಪತ್ರ ಸಲ್ಲಿಸಲು ವಿಫಲರಾಗಿದ್ದಾರೆ.
ಮೋದಿ ವಿರುದ್ಧ ಸ್ಪರ್ಧಿಸಿರುವ ಮಾಜಿ ಸೈನಿಕನಿಗೆ ಆಯೋಗ ನೊಟೀಸ್
ವಾರಣಾಸಿಯಲ್ಲಿ ಪಕ್ಷೇತರವಾಗಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಅವರಿಗೆ ಎಸ್-ಬಿಎಸ್ಪಿ ಮೈತ್ರಿಯು ತಮ್ಮ ಟಿಕೆಟ್ ನೀಡಿ ಬೆಂಬಲಿಸಿತ್ತು, ಆದರೆ ಈಗ ಅವರ ನಾಮಪತ್ರವೇ ರದ್ದಾಗಿದೆ.
ಮೋದಿ ಎದುರಾಳಿ ತೇಜ್ ಬಹದೂರ್ ಯಾದವ್ ಆಸ್ತಿ ವಿವರ
ನಾಮಪತ್ರ ರದ್ದಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ತೇಜ್ ಬಹದ್ದೂರ್, ಈ ಬಗ್ಗೆ ಸುಪ್ರಿಂಕೋರ್ಟ್ನಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.