59 ಮಂದಿ ಸಾವಿಗೆ ಕಾರಣನಾದವನಿಗೆ 1 ವರ್ಷ ಜೈಲು
ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಕೇಸ್ : 59 ಮಂದಿ ಸಾವು, 103 ಜನರಿಗೆ ಗಾಯಗೊಳ್ಳಲು ಕಾರಣರಾದ ಮಾಲೀಕ ಗೋಪಾಲ್ ಅನ್ಸಾಲ್ ಗೆ ಸುಪ್ರೀಂಕೋರ್ಟ್ 1 ವರ್ಷ ಜೈಲುಶಿಕ್ಷೆ ಘೋಷಿಸಿದೆ.
ನವದೆಹಲಿ, ಫೆಬ್ರವರಿ 09: ಉಪಹಾರ್ ಚಿತ್ರಮಂದಿರದ ಅಗ್ನಿ ಅನಾಹುತ ಪ್ರಕರಣದ ತೀರ್ಪು ಗುರುವಾರ ಪ್ರಕಟಗೊಂಡಿದೆ. ಚಿತ್ರಮಂದಿರದ ಮಾಲೀಕ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ.
ಈ ಮುಂಚೆ ಜೈಲು ಭೀತಿಯಿಂದ ಗೋಪಾಲ್ ಸೋದರರು ಪಾರಾಗಿದ್ದರು. 1997ರ ಜೂನ್ 13ರಂದು ಬಾರ್ಡರ್ ಚಿತ್ರ ಪ್ರದರ್ಶನ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 103 ಜನ ಗಾಯಗೊಂಡಿದ್ದರು. [ಉಪಹಾರ್ ದುರಂತ: ಅನ್ಸಾಲ್ ಸೋದರರಿಗೆ ದಂಡ]

ಆರೋಪಿಗಳಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಅವರು ಮುಂದಿನ ಮೂರು ತಿಂಗಳಿನಲ್ಲಿ ತಲಾ 30 ಕೋಟಿ ರು ಪಾವತಿಸುವಂತೆ ಕಳೆದ ವರ್ಷ ಸೂಚಿಸಲಾಗಿತ್ತು.
ಗೋಪಾಲ್ ಅನ್ಸಾಲ್ ಅವರು ಈಗಾಗಲೇ ನಾಲ್ಕು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದು, ಮಿಕ್ಕ ಅವಧಿಯನ್ನು ಜೈಲಿನಲ್ಲಿ ಕಳೆದ ಬೇಕಿದೆ. ಪೊಲೀಸರ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.
ಡಿಸೆಂಬರ್ 2008ರಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಇಬ್ಬರಿಗೂ ಒಂದು ವರ್ಷ ಜೈಲುವಾಸ ಹಾಗೂ ತಲಾ 30 ಕೋಟಿ ರು ದಂಡ ವಿಧಿಸಲಾಗಿದೆ. ಸುಶೀಲ್ ಅನ್ಸಾಲ್ ಅವರು ಈಗಾಗಲೇ ಒಂದು ವರ್ಷ ಅವಧಿಯ ಜೈಲುವಾಸ ಅವಧಿ ಪೂರೈಸಿರುವುದರಿಂದ ಮತ್ತೆ ಜೈಲು ಪಾಲಾಗುವ ಭೀತಿಯಿಂದ ಪಾರಾಗಿದ್ದಾರೆ.












Click it and Unblock the Notifications