ಸಗಣಿಯಿಂದ ತಯಾರಿಸಿದ ಪೇಂಟ್ ಬಗ್ಗೆ ನಿತಿನ್ ಗಡ್ಕರಿ ಟ್ವೀಟ್
ನವದೆಹಲಿ, ಡಿಸೆಂಬರ್ 18: ಸಗಣಿಯಿಂದ ತಯಾರಿಸಲಾಗಿರುವ, ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ವೇದಿಕೆ ಪೇಂಟ್ಸ್ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಸಗಣಿಯಿಂದ ತಯಾರಿಸಲಾಗುತ್ತಿರುವ ಈ ಪೇಂಟ್ ಗ್ರಾಮೀಣ ಭಾಗದ ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ. ಪೇಂಟ್ ಕುರಿತು ಶ್ಲಾಘನೆ ವ್ಯಕ್ತಪಡಿಸಿ, ಖಾದಿ ಹಾಗೂ ಗ್ರಾಮೀಣ ಕೈಗಾರಿಕಾ ಮಿಷನ್ ಅಡಿಯಲ್ಲಿ ಖಾದಿ ಇಂಡಿಯಾ ವತಿಯಿಂದ ಪೇಂಟ್ ಪರಿಚಯಿಸಲಾಗುತ್ತಿದೆ. ಕೃಷಿಯೊಂದಿಗೆ ರೈತರಿಗೆ ಹೆಚ್ಚಿನ ಮಟ್ಟದ ಆದಾಯವನ್ನೂ ಇದು ತಂದುಕೊಡಲಿದೆ ಎಂದು ಹೇಳಿಕೊಂಡಿದ್ದಾರೆ.
ಪೇಂಟ್ ಅನ್ನು ಸಗಣಿಯಿಂದ ತಯಾರಿಸುವುದರಿಂದ ಬ್ಯಾಕ್ಟೀರಿಯಾ ತಡೆಯುತ್ತದೆ. ಪರಿಸರಸ್ನೇಹಿಯಾಗಿದ್ದು, ಬೇರೆ ರಾಸಾಯನಿಕಗಳಂತೆ ವಿಷಕಾರಿಯಲ್ಲ. ಇದನ್ನು ತೊಳೆಯಲೂಬಹುದು. ಈ ಎಲ್ಲಾ ಅಂಶಗಳಿಗಿಂತ ಹೆಚ್ಚಾಗಿ, ಹೈನುಗಾರಿಕೆ ಕೈಗೊಂಡಿರುವ ನಮ್ಮ ರೈತರು ಇದರಿಂದ ಹೆಚ್ಚುವರಿ 55,000 ರೂಪಾಯಿವರೆಗೂ ಆದಾಯ ಪಡೆಯಲು ಸಾಧ್ಯವಿದೆ. ಇದರಿಂದ ಗ್ರಾಮೀಣ ಜೀವನಮಟ್ಟ ಸುಧಾರಿಸುವ ಭರವಸೆ ಇದೆ ಎಂದಿದ್ದಾರೆ.

ಡಿಸ್ಟೆಂಪರ್ ಹಾಗೂ ಎಮಲ್ಷನ್ ರೂಪದಲ್ಲಿ ಪೇಂಟ್ ಪರಿಚಯಿಸಲಾಗಿದ್ದು, ಬಣ್ಣ ಬಳಿದ ನಾಲ್ಕು ಗಂಟೆಗಳಲ್ಲಿ ಸಂಪೂರ್ಣ ಒಣಗುತ್ತದೆ ಎಂದು ಖಾದಿ ಇಂಡಿಯಾ ತಿಳಿಸಿದೆ.












Click it and Unblock the Notifications