ದೆಹಲಿ ಅತ್ಯಾಚಾರಕ್ಕೆ ಊಬರ್ ಕಂಪನಿಯೇ ಹೊಣೆ : ಇನ್ಸ್ಟಾವಾಣಿ ಸಮೀಕ್ಷೆ
ಡಿಸೆಂಬರ್ 5ರಂದು ದೆಹಲಿಯಲ್ಲಿ 27 ವರ್ಷದ ಯುವತಿಯ ಮೇಲೆ ಊಬರ್ ಕ್ಯಾಬ್ ಚಾಲಕನಿಂದ ನಡೆದ ಲೈಂಗಿಕ ದೌರ್ಜನ್ಯ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿದ್ದು, ಕ್ಯಾಬ್ ಕಂಪನಿಗಳು ಮತ್ತು ಅವು ನಡೆದುಕೊಳ್ಳುತ್ತಿರುವ ರೀತಿಯ ಮೇಲೆ ಬೆರಳು ತೋರಿಸಲಾಗಿದೆ. ಆದರೆ, ನಿಷೇಧ ಎದುರಿಸುವ ಆತಂಕಕ್ಕೆ ಗುರಿಯಾಗಿರುವ ಊಬರ್ ಕ್ಯಾಬ್ ಕಂಪನಿ ಗ್ರಾಹಕರನ್ನು ದೂರುತ್ತಿದೆ.
ಈ ಅತ್ಯಾಚಾರಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಡ್ರೈವರುಗಳ ಪೂರ್ವಾಪರ ಸರಿಯಾಗಿ ವಿಚಾರಿಸದೆ ಕ್ರಿಮಿನಲ್ ಗಳಿಗೆ ಅನುಮತಿ ನೀಡುತ್ತಿರುವ ಕ್ಯಾಬ್ ಕಂಪನಿಯನ್ನಾ? ಮಹಿಳೆಯರಿಗೆ ರಕ್ಷಣೆ ನೀಡಲು ಸೋಲುತ್ತಿರುವ ಪೊಲೀಸ್ ಇಲಾಖೆಯನ್ನಾ? ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಿದ್ದರೂ ಪಬ್, ಪಾರ್ಟಿ ಎಂದು ಏಕಾಂಗಿಯಾಗಿ ತಡರಾತ್ರಿ ಸಂಚರಿಸ, ಅತ್ಯಾಚಾರಕ್ಕೆ ತುತ್ತಾಗುತ್ತಿರುವ ಮಹಿಳೆಯರನ್ನಾ?
ಸುರಕ್ಷತಾ ಲೋಪಕ್ಕೆ ಊಬರ್ ಕಂಪನಿ ಕಾರಣವೆ?
ಈ ಕುರಿತು ಜನಮತ ತಿಳಿಯೋಣವೆಂದು ಫೋರ್ತ್ಲಯನ್ ಟೆಕ್ನಾಲಜೀಸ್ನ ಇನ್ಸ್ಟಾವಾಣಿ ಬೆಂಗಳೂರು, ದೆಹಲಿ ಸೇರಿದಂತೆ ಮೆಟ್ರೋದಲ್ಲಿ ವಾಸಿಸುವ ಜನತೆಯ ಮುಂದೆ ಹಲವಾರು ಪ್ರಶ್ನೆಗಳನ್ನು ಹಾಕಿ, ಅಭಿಮತ ಪಡೆದುಕೊಂಡಿದೆ. ಇದಕ್ಕೆಲ್ಲ ಊಬರ್ ಕಂಪನಿಯನ್ನು ದೂರಬೇಕಾ ಎಂದು 1118 ಜನರನ್ನು ಸಂಪರ್ಕಿಸಿತ್ತು. ಇವರಲ್ಲಿ ಶೇ.76ರಷ್ಟು ಜನರು ಊಬರ್ ಹೊಣೆ ಹೊರಬೇಕು ಎಂದರೆ, ಶೇ.24ರಷ್ಟು ಜನರು ವ್ಯತಿರಿಕ್ತವಾಗಿ ವಿಚಾರ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲೂ ಜನರ ಅಭಿಮತ ಸಂಗ್ರಹ
ಆದರೆ, ಬೆಂಗಳೂರು, ಕೊಲ್ಕತಾ, ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಶೇ.70ರಷ್ಟು ಜನರು ಊಬರ್ ಕಂಪನಿಯೇ ಮಹಿಳೆಯ ಮೇಲಾದ ಅತ್ಯಾಚಾರದ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಕ್ರೋಧಿತರಾಗಿದ್ದು ಇದರಿಂದ ಸಾಬೀತಾಗಿದೆ. ಶೇ.81ರಷ್ಟು ಮಹಿಳೆಯರು ಊಬರ್ ಕಂಪನಿಯನ್ನು ದೋಷಿಯನ್ನಾಗಿ ಮಾಡಬೇಕೆಂದು ಒಕ್ಕೊರಲಿನಲ್ಲಿ ಕೂಗಿದ್ದಾರೆ.
ಮತ್ತೆ ಊಬರ್ ಕಂಪನಿಯ ಸೇವೆ ಬಳಸುತ್ತೀರಾ?
ಭವಿಷ್ಯದಲ್ಲಿ ಊಬರ್ ಕಂಪನಿಯ ಕ್ಯಾಬ್ ಗಳ ಸೇವೆಯನ್ನು ಪಡೆಯಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆಗೆ, ಶೇ.59ರಷ್ಟು ಪುರುಷರು ಮತ್ತು ಶೇ.62ರಷ್ಟು ಮಹಿಳೆಯರು 'ಸಾಧ್ಯವೇ ಇಲ್ಲ' ಎಂದು ನಕಾರಾತ್ಮಕ ಉತ್ತರ ನೀಡಿದ್ದಾರೆ. ನಾವು ಊಬರ್ ಕ್ಯಾಬ್ ನಲ್ಲಿ ಪ್ರಯಾಣಿಸುವುದು ಅಸುರಕ್ಷಿತ ಎಂದಿದ್ದಾರೆ. ಆದರೆ, ಅಚ್ಚರಿಯೆಂಬಂತೆ, ಶೇ.41ರಷ್ಟು ಜನರು ತಾವು ಊಬರ್ ಕಂಪನಿಯ ಕ್ಯಾಬ್ ಬಳಸಲು ಹಿಂದೇಟು ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಊಬರ್ ಮತ್ತಿತರ ಟ್ಯಾಕ್ಸಿ ಕಂಪನಿ ನಿಷೇಧಿಸಿದ್ದು ಎಷ್ಟು ಸರಿ?
ಕ್ಯಾಬ್ ಕಂಪನಿಗಳಿಗೆ ದೆಹಲಿಯಲ್ಲಿ ಈಗಾಗಲೆ ನಿಷೇಧ ಹೇರಲಾಗಿದೆ. ಊಬರ್ ಕಂಪನಿ ಮತ್ತು ಮೊಬೈಲ್ ಆಪ್ ಬಳಸಿ ಗ್ರಾಹಕರಿಗೆ ಕ್ಯಾಬ್ ಸೇವೆ ನೀಡುವ ಓಲಾ ಮತ್ತು ಟ್ಯಾಕ್ಸಿ ಫಾರ್ ಶೂರ್ ಕಂಪನಿಗಳನ್ನು ದೆಹಲಿ ಸರಕಾರ ನಿಷೇಧಿಸಿದೆ. ಶೇ.48ರಷ್ಟು ಗ್ರಾಹಕರು ದೆಹಲಿ ಸರಕಾರದ ಈ ಕ್ರಮಕ್ಕೆ ಥಂಬ್ಸ್ ಅಪ್ ಹೇಳಿದ್ದರೆ, ಶೇ.52ರಷ್ಟು ಜನರು ದೆಹಲಿ ಸರಕಾರ ದುಡುಕಿದೆ ಎಂದಿದ್ದಾರೆ. ಶೇ.51ರಷ್ಟು ಮಹಿಳೆಯರು ಸರಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಅಭಿಮತ ತಿಳಿಸಿದ್ದಾರೆ.
ಊಬರ್ ಕಂಪನಿ ದೂಷಿಸುವವರಲ್ಲಿ ಮಹಿಳೆಯರೇ ಹೆಚ್ಚು
ಇದೆಲ್ಲದರ ಫಲಿತಾಂಶವೇನೆಂದರೆ, ಇಡೀ ದೇಶದಲ್ಲಿ ಮಹಿಳೆಯರು ಈ ಘಟನೆಯಿಂದ ಸಾಕಷ್ಟು ವಿಚಲಿತರಾಗಿದ್ದಾರೆ, ಮಹಿಳೆಯರಿಗೆ ಸಾಕಷ್ಟು ಭದ್ರತೆ ಸಿಗುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಮೀಕ್ಷೆಯಲ್ಲಿ ಒಟ್ಟಾರಿಯಾಗಿ ಈ ಘಟನೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ, ಮಹಿಳೆಯರು ಮಾತ್ರ ಒಕ್ಕೊರಲಿನಿಂದ ಊಬರ್ ಕ್ಯಾಬ್ ಕಂಪನಿಯ ಮೇಲೆ ಕೆಂಗಣ್ಣು ಬೀರಿರುವುದು ಸಾಬೀತಾಗಿದೆ. ಮತ್ತು ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.
ಘೋಷವಾಕ್ಯ ಕಾಪಾಡಿಕೊಳ್ಳಲು ಸೋತ ಊಬರ್
'ಸುರಕ್ಷಿತ, ನಂಬಿಗಸ್ತ ಮತ್ತು ಕೈಗೆಟಕುವ' ಸೇವೆ ನೀಡುವ ಮಂತ್ರ ಊಬರ್ ಕಂಪನಿ ಜಪಿಸುತ್ತಿದ್ದರೂ, ಇವೆಲ್ಲ ಸೇವೆಯನ್ನು ಸಂಪೂರ್ಣವಾಗಿ ನೀಡಲು ಊಬರ್ ಸೋತಿದೆ ಎಂಬುದು ಇನ್ಸ್ಟಾವಾಣಿ ಸಂಪರ್ಕಿಸಿರ ಜನರ ಸ್ಪಷ್ಟ ನಿಲುವಾಗಿದೆ. ತಾನು ನೀಡಿರುವ ಘೋಷವಾಕ್ಯವನ್ನು ಹೇಳಿದಂತೆ ಜಾರಿಗೆ ತರಲು ಮತ್ತು ಸ್ಟಾಂಡರ್ಡನ್ನು ಕಾಪಾಡಿಕೊಳ್ಳಲು ಊಬರ್ ಕಂಪನಿ ಸೋತಿದೆ.
ಅತ್ಯಾಚಾರಿಯ ಹಿನ್ನೆಲೆ ತಿಳಿಯಲು ಊಬರ್ ವಿಫಲ
ಅತ್ಯಾಚಾರಿ ಶಿವಕುಮಾರ್ ಹಿಂದೆ ಕೂಡ ಇಂಥದೇ ಅಪರಾಧ ಎಸಗಿದ್ದರೂ, ಆತನ ಹಿನ್ನೆಲೆ ತಿಳಿಯಲು ಊಬರ್ ಕಂಪನಿ ವಿಫಲವಾಗಿರುವುದು ಸ್ಪಷ್ಟ. ಅಲ್ಲದೆ, ಅಮೆರಿಕದಲ್ಲಿ ಕೂಡ ಚಾಲಕರ ಪೂರ್ವಾಪರ ತಿಳಿಯುವ ವಿಷಯದಲ್ಲಿ ತಪ್ಪೆಸಗುತ್ತಿರುವುದು ಅಮೆರಿಕದ ಸ್ಯಾನ್ ಫ್ರಾನ್ಸಿಕ್ಕೋದಲ್ಲಿಯೂ ಟೀಕೆಗೆ ಗುರಿಯಾಗಿತ್ತು. 2014ರ ಜನವರಿಯಲ್ಲಿ ಊಬರ್ ಕಂಪನಿ ಡ್ರೈವರ್ 6 ವರ್ಷದ ಮಗುವಿಗೆ ಗುದ್ದಿ ಹತ್ಯೆಗೀಡು ಮಾಡಿದ್ದ. ಆರೋಪಿಯ ಅಪರಾಧ ಹಿನ್ನೆಲೆ ತಿಳಿಯಲು ಆಗ ಕೂಡ ಊಬರ್ ವಿಫಲವಾಗಿತ್ತು.