ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ
ನವದೆಹಲಿ, ಜನವರಿ 03: ರಾಜ್ಯಸಭೆಯಲ್ಲಿ ಇಂದು ಕೇಂದ್ರ ಸಚಿವ ಕಾನೂನು ಸಚಿವ ರವಿಶಂಕರ್ ಅವರು ಗದ್ದಲದ ನಡುವೆಯೇ ತ್ರಿವಳಿ ತಲಾಖ್ ಮಸೂದೆ ಮಂಡನೆ ಮಾಡಿದರು.
ತ್ರಿವಳಿ ತಲಾಖ್ ಮಸೂದೆಯು ಡಿಸೆಂಬರ್ 23ರಂದು ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿ ರಾಜ್ಯಸಭೆಗೆ ವರ್ಗಾಯಿಸಲ್ಪಟ್ಟಿತ್ತು. ಆದರೆ ಇಂದು ಕಾಂಗ್ರೆಸ್ ಸೇರಿದಂತೆ ಕೆಲವು ಸದಸ್ಯರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ಬೇಸರ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರು ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ಕಳುಹಿಸುವಂತೆ ನೋಟೀಸ್ ನೀಡಿದರು ಹಾಗೂ ಸೆಲೆಕ್ಟ್ ಕಮಿಟಿಯ ಸದಸ್ಯರನ್ನೂ ಸೂಚಿಸದರು. ಇದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ತೀರ್ವ ಬೇಸರ ವ್ಯಕ್ತಪಡಿಸಿದರು.
ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?
ಕಲಾಪದ ನಂತರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು 'ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ಸೂಚಿಸಿ ಈಗ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸಿರುವುದು ಅವರ ಇಬ್ಬಂದಿತನವನ್ನು ಸೂಚಿಸುತ್ತದೆ, ಲೋಕಸಭೆಯಲ್ಲಿ ಅವರ ಸಂಖ್ಯೆ ಕಡಿಮೆ ಇತ್ತು ಹಾಗಾಗಿ ಅಷ್ಟೆ ಅವರು ಬೆಂಬಲ ಸೂಚಿಸಿದ್ದರು, ಜನರ ಹಿತದೃಷ್ಠಿಯಿಂದ ಅಲ್ಲ' ಎಂದಿದ್ದಾರೆ.
ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ನ ಸಂಸದ ಡೆರೆಕ್ ಓ ಬ್ರಿಯನ್ ಅವರು "ಇದೊಂದು ದೋಷಪೂರಿತ ಮಸೂದೆಯಾಗಿದ್ದು, ಯಾವುದೇ ಮಹಿಳಾ ಸಂಘಗಳು, ಭಾದಿತರೊಂದಿಗೆ ಬಳಿ ಚರ್ಚೆ ನಡೆಸದೆ ಮಸೂದೆ ತಯಾರಿಸಲಾಗಿದೆ, ಮಹಿಳಾ ಸಂಘ ಹಾಗೂ ಭಾದಿತರೊಂದಿಗೆ ಜೊತೆ ಮಾತನಾಡಿ ಮಸೂದೆ ಮಂಡಿಸಿ ಎಂದಷ್ಟೆ ನಾವು ಕೇಳುತ್ತಿದ್ದೇವೆ' ಎಂದರು.