4 ದಿನಗಳ ಕಾಲ ಸೇನಾ ಕಮಾಂಡರ್ಗಳ ಸಮಾವೇಶ, ಚರ್ಚಾ ವಿಷಯಗಳೇನು?
ನವದೆಹಲಿ, ಅಕ್ಟೋಬರ್ 25: ನಾಲ್ಕು ದಿನಗಳ ಕಾಲ ಸೇನಾ ಕಮಾಂಡರ್ಗಳ ಸಮಾವೇಶ ದೆಹಲಿಯಲ್ಲಿ ಜರುಗಲಿದೆ.
ಸಮಾವೇಶದಲ್ಲಿ ಸೇನೆಯ ಉನ್ನತ ಅಧಿಕಾರಿಗಳು, ಸೇನಾ ಕಮಾಂಡರ್ಗಳು, ಸೇನಾ ಮುಖ್ಯ ಕಚೇರಿಯ ಸಿಬ್ಬಂದಿ ವಿಭಾಗದ ಮುಖ್ಯಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಸೇನೆಯ ಕುರಿತು ಆಂತರಿಕ ಸಮಿತಿ ಮಾಡಿರುವ ಶಿಫಾರಸುಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಭಾರತೀಯ ಸೇನೆಯ ಉನ್ನತ ಕಮಾಂಡರ್ಗಳ ನಾಲ್ಕು ದಿನಗಳ ದ್ವೈವಾರ್ಷಿಕ ಸಮಾವೇಶ ಇಂದಿನಿಂದ ನವದೆಹಲಿಯಲ್ಲಿ ಆರಂಭವಾಗಲಿದೆ. ಸೇನೆಯ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿಯ ಚರ್ಚೆ ಮತ್ತು ಸೇನೆಯ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.

ಅಕ್ಟೋಬರ್ 10 ರಂದು ಭಾರತ-ಚೀನಾ ಕೊನೆಯ ಸುತ್ತಿನ ಮಾತುಕತೆ ನಡೆದಿದ್ದು, ಬಿಕ್ಕಟ್ಟಿಗೆ ಯಾರು ಹೊಣೆ ಎಂಬ ವಿಚಾರವಾಗಿ ಪರಸ್ಪರ ದೂಷಿಸಿಕೊಂಡರು. ಸದ್ಯ ಎಲ್ಎಸಿ ಉದ್ದಕ್ಕೂ ಎರಡೂ ಕಡೆಯವರು ಅಂದಾಉ 50 ಸಾವಿರದಿಂದ 60 ಸಾವಿರ ಸೈನಿಕರನ್ನು ಹೊಂದಿದೆ.
ಸಮಾವೇಶದ ಮೊದಲ ದಿನ ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶ ಉದ್ದೇಶಿಸಿ ಮಂಗಳವಾರ ಮಾತನಾಡಲಿದ್ದಾರೆ.
ರಕ್ಷಣಾ ಸಚಿವರ ಭಾಷಣಕ್ಕೆ ಮುಂಚಿತವಾಗಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು(ಸಿಡಿಎಸ್)ಬಿಪಿನ್ ರಾವತ್ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರು ಕಮಾಂಡರ್ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೂರನೇ ದಿನ ವಿವಿಧ ಸೇನಾ ಕಮಾಂಡರ್ಗಳು ಯೋಜಿಸಿರುವ ವಿವಿಧ ಕಾರ್ಯಸೂಚಿಗಳ ಕುರಿತು ಚರ್ಚೆ ನಡೆಯಲಿದೆ. ಇದಾದ ನಂತರ ವಿವಿಧ ಪ್ರಧಾನ ಸಿಬ್ಬಂದಿ ಅಧಿಕಾರಿಗಳಿಂದ ವಿವಿಧ ವಿಷಯಗಳ ಬಗ್ಗೆ ಸಂಕ್ಷಿಪ್ತ ಚರ್ಚೆ ನಡೆಯಲಿದೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕನೇ ಹಾಗೂ ಅಂತಿಮ ದಿನದ ಸಮಾವೇಶದಲ್ಲಿ ಗಡಿ ರಸ್ತೆಗಳ ಪ್ರಧಾನ ನಿರ್ದೇಶಕರು (ಡಿಜಿಬಿಆರ್) ಗಡಿ ರಸ್ತೆಗಳ ಸಂಘಟನೆಯ (ಬಿಆರ್ಒ) ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅಲ್ಲದೇ ಸೇನೆಯ ವಿವಿಧ ಹಂತಗಳಲ್ಲಿ ಮಾನವ ಸಂಪನ್ಮೂಲದ ಬಳಕೆಯನ್ನು ಉತ್ತಮಗೊಳಿಸುವ ಸ್ವಯಂಚಾಲಿತ ಕ್ರಮಗಳ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಸೇನಾ ಮುಖ್ಯಸ್ಥರು ಸಮಾರೋಪ ಭಾಷಣ ಮಾಡಲಿದ್ದಾರೆ.
ಚೀನಾದೊಂದಿಗೆ 17 ತಿಂಗಳುಗಳ ಕಾಲ ಸಂಘರ್ಷ ಏರ್ಪಟ್ಟ ಪೂರ್ವ ಲಡಾಖ್ ಭಾಗದಲ್ಲಿ ಸೇನೆಯನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ವಿಚಾರಗಲ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ದೇಶದ ಭದ್ರತಾ ಸವಾಲುಗಳ ಕುರಿತು ಭಾರತೀಯ ಸೇನೆಯ ಉನ್ನತ ಮಟ್ಟದ ಕಮಾಂಡರ್ ಗಳು ಸಭೆ ನಡೆಸಿ ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಪೂರ್ವ ಲಡಾಖ್ ಸೇರಿದಂತೆ ಚೀನಾದ ಗಡಿಯಲ್ಲಿನ ಎಲ್ಎಸಿ ಪ್ರದೇಶವನ್ನೂ ಒಳಗೊಂಡಂತೆ ಕಮಾಂಡರ್ ಗಳು ಪರಿಶೀಲನೆ ಕೈಗೊಳ್ಳಲಿದ್ದಾರೆ
ಜಮ್ಮು ಕಾಶ್ಮೀರದಲ್ಲಿ ನಡೆದ ನಾಗರಿಕರ ಹತ್ಯೆ ಹಾಗೂ ಅಲ್ಲಿನ ಭದ್ರತಾ ಸನ್ನಿವೇಶಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸೇನಾ ಮುಖ್ಯಸ್ಥ ನರವಾಣೆ ಹಾಗೂ ಕಮಾಂಡರ್ಗಳು ಪೂರ್ವ ಲಡಾಖ್ನ ಉದ್ವಿಗ್ನ ಸ್ಥಿತಿಯ ಕುರಿತು ಹಾಗೂ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ದೇಶದ ಭದ್ರತೆ ಮೇಲೆ ಬೀರಬಹುದಾದ ಸಂಭವನೀಯ ಪರಿಣಾಮಗಳ ಕುರಿತೂ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಭಾರತ ಮತ್ತು ಚೀನಾ ನಡುವಿನ ಗಡಿ ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಸೇನಾ ಮಾತುಕತೆಗಳಲ್ಲಿ ಭಾರತವು ಎಂದಿಗೂ ಅನುಕೂಲಕರ ಫಲಿತಾಂಶವನ್ನು ನಿರೀಕ್ಷಿಸಬಾರದು, ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಹೇಳಿದ್ದರು.
ಆದರೆ ಉಭಯ ರಾಷ್ಟ್ರಗಳ ನಡುವಿನ ಸಂಧಾನ ಮಾತುಕತೆಗಳು ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ತಿಳಿಸಿದ್ದರು.
ಭಾರತ-ಚೀನಾ ಗಡಿ ವಿಚಾರದಲ್ಲಿ 3 ರಿಂದ 4 ಪ್ರದೇಶಗಳಲ್ಲಿ ಘರ್ಷಣೆ ನಡೆಯುತ್ತಿದ್ದು ಒಂದನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಸಮಸ್ಯೆಗಳನ್ನು ನಾವು ಬಗೆಹರಿಸಿದ್ದೇವೆ. ಇನ್ನೊಂದು ಸುತ್ತಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವ ಖಚಿತತೆಯಿದೆ. ಆದರೆ ಸ್ಪಷ್ಟವಾಗಿ ಒಂದು ಅಥವಾ ಎರಡು ಸುತ್ತಿನ ಮಾತುಕತೆಗಳಲ್ಲಿ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ನಾನು ಸ್ಪಷ್ಟವಾಗಿ ಅಂಕಿ-ಅಂಶವನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.
ನಾವು ಈ ವಿಷಯದಲ್ಲಿ ಮುಂದುವರಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ನರವಾಣೆ ತಿಳಿಸಿದ್ದರು.












Click it and Unblock the Notifications