ಟಿಪ್ಪು ಸುಲ್ತಾನ್ ವಿವಾದ: ಈಗ ದೆಹಲಿ ಅಸೆಂಬ್ಲಿಯಲ್ಲಿ!
ನವದೆಹಲಿ, ಜನವರಿ 27 : ಕರ್ನಾಟಕ ರಾಜಕಾರಣದಲ್ಲಿ ಕಳೆದ ಎರಡು ವರ್ಷಗಳಿಂದ ಸಂಘರ್ಷದ ಕಿಡಿ ಹೊತ್ತಿಸಿದ್ದ ಟಿಪ್ಪು ಸುಲ್ತಾನ್ ವಿವಾದ ಇದೀಗ ದೇಶದ ರಾಜಧಾನಿ ದೆಹಲಿ ತಲುಪಿದೆ.
ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ದೆಹಲಿಯ ವಿಧಾನಸಭೆ ಗ್ಯಾಲರಿಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್, ಟಿಪ್ಪು ಸುಲ್ತಾನ್ ಸೇರಿದಂತೆ 69 ಸ್ವತಂತ್ರ ಹೋರಾಟಗಾರರು ಹಾಗೂ ಕ್ರಾಂತಿಕಾರಿ ಮಹಾನುಭಾವರ ಭಾವಚಿತ್ರಗಳನ್ನು ಇರಿಸಿರುವ ಹಿನ್ನೆಯಲ್ಲಿ ಇದೀಗ ದೆಹಲಿಯಲ್ಲೂ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾವಚಿತ್ರವನ್ನು ಅಳವಡಿಸಿರುವ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಟಿಪ್ಪು ಸುಲ್ತಾನ್ ಭಾವಚಿತ್ರವನ್ನು 69 ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾನುಭಾವರ ಪಟ್ಟಿಯಲ್ಲಿ ಸೇರಿಸಿರುವ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದೆ.
ದೆಹಲಿ ವಿಧಾನ ಸಭೆಯ ಬಿಜೆಪಿ ಸದಸ್ಯ ಓಂ ಪ್ರಕಾಶ್ ಶರ್ಮಾ ಈ ಕೂಡಲೇ ಟಿಪ್ಪು ಸುಲ್ತಾನ್ ಭಾವಚಿತ್ರ ವಾಪಾಸ್ ಪಡೆಯಲು ಒತ್ತಾಯಿಸಿದ್ದಾರೆ. ದೆಹಲಿ ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಟಿಪ್ಪು ಭಾವಚಿತ್ರವನ್ನು ಇರಿಸಿರುವ ಕುರಿತಂತೆ ಬಿಜೆಪಿ ವ್ಯಕ್ತಪಡಿಸಿರುವ ವಿರೋಧಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದು, ಬಿಜೆಪಿ ಯಾವಾಗಲೂ ಇದೇ ರೀತಿಯ ವಿವಾದಗಳನ್ನು ಸೃಷ್ಟಿಸುತ್ತದೆ ಎಂದಷ್ಟೇ ಹೇಳಿದ್ದಾರೆ.
ಸ್ಪೀಕರ್ ಗೋಯಲ್ ಹೇಳಿಕೆಯೊಂದನ್ನು ನೀಡಿ ಭಾರತದ ಸಂವಿಧಾನ144 ನೇ ಪುಟದಲ್ಲಿ ಟಿಪ್ಪು ಸುಲ್ತಾನ್ ಚಿತ್ರವಿದೆ ಎಂಬುದನ್ನು ಬಿಜೆಪಿ ಶಾಸಕರ ಗಮನಕ್ಕೆ ತರಲು ಬಯಸುತ್ತೇನೆ. ಹೀಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ದೇಶದ್ರೋಹಿ ಎನ್ನುವುದಾದರೆ ಸಂವಿಧಾನದಲ್ಲಿ ದೇಶದ್ರೋಹಿಗಳ ಭಾವಚಿತ್ರವಿದೆ ಎಂದೇ ಭಾವಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ಟಿಪ್ಪು ಸುಲ್ತಾನ್ ಕುರಿತಂತೆ 2015 ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದಾಗಿ ಪ್ರಕಟಿಸಿದ ಬೆನ್ನಲ್ಲೇ ದೇಶಾದ್ಯಂತ ವಿವಾದ ಹೊತ್ತಿಕೊಂಡಿತ್ತು.
ವಿಶೇಷವಾಗಿ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಪ್ರಥಮ ಜಯಂತಿ ಆಚರಣೆ ವೇಳೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಗಲಭೆ ಇಡೀ ರಾಷ್ಟ್ರದ ಗಮನಸೆಳೆದಿತ್ತು. ಅದಾದ ಬಳಿಕ ಬಿಜೆಪಿ ಟಿಪ್ಪು ಸುಲ್ತಾನ್ ದೇಶದ್ರೋಹಿ ಎಂದು ನಿಂದಿಸುತ್ತಲೇ ಬಂದಿದ್ದು, ಇತಿಹಾಸಪುಟಗಳಿಂದ ಟಿಪ್ಪು ಸುಲ್ತಾನ್ ಬಗೆಗಿರುವ ಅಧ್ಯಾಯವನ್ನು ತೆಗೆದುಹಾಕುವಂತೆಯೂ ಒತ್ತಾಯಿಸುತ್ತಿದೆ.