ಭಾರೀ ಭಯೋತ್ಪಾದಕ ದಾಳಿ ಸಂಚು ವಿಫಲಗೊಳಿಸಿದ ಪೊಲೀಸರು
ದೇಶದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿರುವ ದೆಹಲಿ ಪೊಲೀಸರು, ಮೂವರು ಶಂಕಿತ ಉಗ್ರರನ್ನು ಬಂಧಿಸಿ, ಅವರಿಂದ ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವದೆಹಲಿ, ನವೆಂಬರ್ 26: ದೇಶದಲ್ಲಿ ದಾಳಿ ಮಾಡಲು ಸಂಚು ರೂಪಿಸಿದ್ದ ಮತ್ತು ಸಂಭವಿಸಬಹುದಾಗಿದ್ದ ಅತಿದೊಡ್ಡ ಭಯೋತ್ಪಾದಕ ದಾಳಿಯನ್ನು ದೆಹಲಿ ಪೊಲೀಸರು ವಿಫಲಗೊಳಿಸಿದ್ದಾರೆ.
ಆಸ್ಸಾಂ ಪೊಲೀಸರೊಂದಿಗೆ ಸೋಮವಾರ ಜಂಟಿ ಕಾರ್ಯಾಚರಣೆ ಮಾಡಿದ ದೆಹಲಿ ಪೊಲೀಸರು ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರಿಂದ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರೆಡೆ ಸಂಭವಿಸಬಹುದಾಗಿದ್ದ ಬಹುದೊಡ್ಡ ಉಗ್ರ ದಾಳಿಯನ್ನು ವಿಫಲವಾಗಿಸಿದ್ದಾರೆ.
ಮುಖದಿರ್ ಇಸ್ಲಾಮ್, ರಂಜಿತ್ ಅಲಿ ಮತ್ತು ಜಮೀಲ್ ಶಂಕಿತ ಉಗ್ರರಾಗಿದ್ದು, ಆರೋಪಿಗಳಿಂದ ಸುಧಾರಿತ ಐಇಡಿ ಸ್ಪೋಟಕಗಳು ಮತ್ತು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐಸಿಸ್ ಜೊತೆ ಇದ್ದ ಕೇರಳ ಯುವತಿ ಅಫ್ಗಾನ್ ನಲ್ಲಿ ಶರಣು
ಮುಂಬೈ ದಾಳಿ ನಡೆದು ಇವತ್ತಿಗೆ 11 ವರ್ಷಗಳು ತುಂಬಿದ ದಿನವಾಗಿದ್ದು, ಇದೇ ಹೊತ್ತಿನಲ್ಲಿ ಈ ಭಾರೀ ಉಗ್ರ ಸಂಚು ಬಯಲಾಗಿದೆ. ಆಸ್ಸಾಂ ಮೂಲದ ಈ ಮೂವರು ಉಗ್ರರು ಐಸಿಸ್ ನಿಂದ ಪ್ರೇರಣೆಗೊಂಡಿದ್ದರು.
ಅಸ್ಸಾಂನ ಗೋಪಾಲಪುರ ಜಿಲ್ಲೆಯಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಮತ್ತು ದೆಹಲಿಯ ಜನನಿಬೀಡ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ದೆಹಲಿ ಪೊಲೀಸ್ ಡೆಪ್ಯುಟಿ ಕಮಿಷನರ್ ಪ್ರಮೋದ್ ಸಿಂಗ್ ಖುಷ್ವಾಹ ಹೇಳಿದ್ದಾರೆ.