Breaking: ತೀಸ್ತಾ ಜಾಮೀನು ಅರ್ಜಿ; ಗುಜರಾತ್ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಆಗಸ್ಟ್ 22: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ಕುರಿತು ಗುಜರಾತ್ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ನೀಡಿದೆ.
ಆಗಸ್ಟ್ 25 ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತೀಸ್ತಾ ಸೆಟಲ್ವಾಡ್ ಮನವಿಗೆ ರಾಜ್ಯಕ್ಕೆ ನೋಟಿಸ್ ಜಾರಿ ಮಾಡಿದೆ.
2002 ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ ಮುಗ್ಧರನ್ನು ಬಂಧಿಸಲು ಪಿತೂರಿ ಮತ್ತು ಸಾಕ್ಷ್ಯವನ್ನು ನಿರ್ಮಿಸಿದ ಆರೋಪದಲ್ಲಿ ತೀಸ್ತಾ ಸೆಟಲ್ವಾಡ್ ಅವರನ್ನು ಜೂನ್ನಲ್ಲಿ ಬಂಧಿಸಲಾಗಿದೆ.
ಕಳೆದ ಆಗಸ್ಟ್ 3 ರಂದು ಗುಜರಾತ್ ಹೈಕೋರ್ಟ್ ತೀಸ್ತಾ ಜಾಮೀನು ಅರ್ಜಿಯ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಸೆಪ್ಟೆಂಬರ್ 19 ರಂದು ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿತ್ತು.
ಇದಕ್ಕೂ ಮೊದಲು, ಜುಲೈ 30 ರಂದು, ಅಹಮದಾಬಾದ್ನ ಸೆಷನ್ಸ್ ನ್ಯಾಯಾಲಯವು ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್ಬಿ ಶ್ರೀಕುಮಾರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಇವರನ್ನು ಬಿಡುಗಡೆ ಮಾಡಿದರೆ ಒಬ್ಬ ವ್ಯಕ್ತಿಯು ನಿರ್ಭಯವಾಗಿ ಆರೋಪಗಳನ್ನು ಮಾಡಿ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶವನ್ನು ನೀಡುತ್ತದೆ ಎಂದು ಹೇಳಿದ್ದರು.
ಜೂನ್ನಲ್ಲಿ ಬಂಧಿತರಾದ ಸೆಟಲ್ವಾಡ್ ಮತ್ತು ಶ್ರೀಕುಮಾರ್, ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ "ಮುಗ್ಧರನ್ನು" ಬಂಧಿಸಲು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ ಆರೋಪವನ್ನು ಹೊಂದಿದ್ದಾರೆ.
ಪ್ರಕರಣದ ಮೂರನೇ ಆರೋಪಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಸಂಜೀವ್ ಭಟ್ ಈಗಾಗಲೇ ಮತ್ತೊಂದು ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದರು.
ತೀಸ್ತಾ ಸೆಟಲ್ವಾಡ್ ಅವರನ್ನು ಮುಂಬೈನ ಅವರ ನಿವಾಸದಲ್ಲಿ ಜೂನ್ 25, ಶನಿವಾರ ಸಂಜೆ ಗುಜರಾತ್ನ ಎಟಿಎಸ್ ಪೊಲೀಸರು ಬಂಧಿಸಿದ್ದರು. 2002ರ ಗಲಭೆ ಸಂಬಂಧ ನರೇಂದ್ರ ಮೋದಿಗೆ ದೋಷಮುಕ್ತಗೊಳಿಸಲಾಗಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ದಿನ ಬಳಿಕ ಈ ಬೆಳವಣಿಗೆಯಾಗಿತ್ತು.
ಮುಂಬೈನವರಾದ ತೀಸ್ತಾ ನಾಗರಿಕ ಹಕ್ಕು ಹೋರಾಟಗಾರ್ತಿ ಮತ್ತು ಪತ್ರಕರ್ತೆ. 2002ರ ಗುಜರಾತ್ ಗಲಭೆ ವೇಳೆ ಕೋಮುಗಲಭೆಗಳಿಗೆ ಸರಕಾರಿ ಯಂತ್ರಗಳೇ ಪ್ರಚೋದನೆ ಮತ್ತು ಕುಮ್ಮಕ್ಕು ನೀಡಿದವು ಎಂಬುದು ಇವರು ಮಾಡಿದ ಪ್ರಮುಖ ಆರೋಪ.
ತೀಸ್ತಾ ಸೆಟಲ್ವಾಡ್ ಅವರ 'ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (CJP- Citizens For Justice and Peace)" ಎಂಬ ಎನ್ಜಿಒ ಸಂಸ್ಥೆ ಇದೆ. ಇದು 2002ರ ಗುಜರಾತ್ ಗಲಭೆಯಲ್ಲಿ ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಲೆಂದು ಮತ್ತು ಕೋರ್ಟ್ಗಳಲ್ಲಿ ವಕಲಾತು ವಹಿಸಲೆಂದು ಹುಟ್ಟುಹಾಕಿದ ಸಂಸ್ಥೆ.