ಟಿಡಿಪಿ-ಎನ್ ಡಿಎ ಬ್ರೇಕ್ ಅಪ್: ಅಮಿತ್ ಶಾಗೆ ನುಂಗಲಾರದ ತುತ್ತು?!
ನವದೆಹಲಿ, ಮಾರ್ಚ್ 24: ಎನ್ ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಹೋಗಿದ್ದು ಅಮಿತ್ ಶಾ ಅವರಿಗೆ ಇರಿಸುಮುರಿಸುಂಟಾಗುವಂತೆ ಮಾಡಿದೆಯಾ? ಈ ಕುರಿತು ಇಷ್ಟುದಿನ ಮೌನವಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈಗ ಮೌನ ಮುರಿದಿದ್ದೇಕೆ?!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎನ್ ಡಿಎ(National Democratic Alliance) ಮೈತ್ರಿಕೂಟದಿಂದ ಹೊರಬಂದ ಟಿಡಿಪಿ(ತೆಲುಗು ದೇಶಂ ಪಾರ್ಟಿ) ನಿರ್ಧಾರದ ಕುರಿತಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದ ಅಮಿತ್ ಶಾ ನಡೆ ಕುತೂಹಲ ಕೆರಳಿಸಿದೆ.
ಟಿಡಿಪಿ ನಡೆಯಿಂದಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಾ ಅವರಿಗೆ ನುಂಗಲಾರದ ತುತ್ತೇ ಸರಿ. ಅತ್ತ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ದಿಗ್ವಿಜಯ ಯಾತ್ರೆ ನಡೆಸುತ್ತಿದ್ದರೆ, ಇತ್ತ ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಹಿಡಿತವನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಇವೆಲ್ಲ ಪ್ರಭಾವ ಬೀರಿದರೆ ಅಚ್ಚರಿಯೇನಿಲ್ಲ. ಆದ್ದರಿಂದಲೇ ಎಚ್ಚೆತ್ತುಕೊಂಡ ಅಮಿತ್ ಶಾ ಪತ್ರದ ಮೊರೆ ಹೋಗಿದ್ದಾರೆ ಎಂಬುದು ಹಲವರ ಅಭಿಪ್ರಾಯ.

ಅಷ್ಟಕ್ಕೂ ಪತ್ರದಲ್ಲೇನಿದೆ?
ಪತ್ರದಲ್ಲಿ ಶಾ, ಚಂದ್ರಬಾಬು ನಾಯ್ಡು ಅವರನ್ನುದ್ದೇಶಿಸಿ, ನಿಮ್ಮ ನಿರ್ಧಾರ 'ದುರದೃಷ್ಟ' ಮತ್ತು 'ಏಕಪಕ್ಷೀಯ' ಎಂದಿದ್ದಾರೆ.
"ಬಿಜೆಪಿ ಎಂದಿಗೂ ಅಭಿವೃದ್ಧಿ ರಾಜಕೀಯದಲ್ಲಿ ನಂಬಿಕೆ ಇಟ್ಟಿದೆ. ಸರ್ವರ ಅಭಿವೃದ್ಧಿಯೇ ನಮ್ಮ ಗುರಿ. ನಿಮ್ಮ ನಿರ್ಧಾರ ನನಗೆ ಭಯ ಮೂಡಿಸಿದೆ. ಈ ಮೂಲಕ ನೀವು ಅಭಿವೃದ್ಧಿ ರಾಜಕೀಯಕ್ಕಿಂತ ಅನುಕೂಲದ ರಾಜಕೀಯಕ್ಕೆ ಬೆಲೆ ಕೊಡುತ್ತಿದ್ದೀರಿ ಎನ್ನಿಸುತ್ತಿದೆ" ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶ-ತೆಲಂಗಾಣ ವಿಭಜನೆಯ ಸಮಯದಿಂದಲೂ ಈ ಎರಡೂ ರಾಜ್ಯಗಳ ಅಭಿವೃದ್ಧಿ ಮತ್ತು ತೆಲುಗು ಜನರ ಹಿತರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧವಾಗಿರುತ್ತದೆ ಎಂದು ನಾವು ಎಂದೋ ಹೇಳಿದ್ದೆವು. ಅದರಂತೆಯೇ ನಡೆದುಕೊಂಡಿದ್ದೇವೆ. ತೆಲುಗು ಜನರಿಗೆ ದ್ರೋಹ ಬಗೆದಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿಯಲ್ಲ ಎಂಬುದು ನೆನಪಿರಲಿ" ಎಂದು ಶಾ ಪತ್ರದಲ್ಲಿ ತಿಳಿಸಿದ್ದಾರೆ.
2014 ರಿಂದ ಎನ್ ಡಿಎ ಮೈತ್ರಿಕೂಟದೊಂದಿಗಿದ್ದ ಟಿಡಿಪಿ ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗೆ ಮೋದಿ ಸರ್ಕಾರ ಸ್ಪಂದಿಸದ ಕಾರಣಕ್ಕೆ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು.












Click it and Unblock the Notifications