ಕನ್ನಡಿಗರ ಮಾನವೀಯತೆ ತಮಿಳ್ನಾಡಿಂದ ದುರುಪಯೋಗ : ಗೌಡ
ನವದೆಹಲಿ, ಸೆಪ್ಟೆಂಬರ್ 09 : ಕಾವೇರಿ ವಿಚಾರದಲ್ಲಿ ದಶಕಗಳಿಂದ ಅನ್ಯಾಯ ಅನುಭವಿಸುತ್ತಾ ಬಂದಿರುವ ಕನ್ನಡಿಗರ ನೋವನ್ನು ಸುಪ್ರಿಂ ಕೋರ್ಟ್ ಮುಂದೆ ಸಮರ್ಥವಾಗಿ ಮಂಡಿಸುವ ವಕೀಲರು ಇಲ್ಲದಿರುವುದು ನಮ್ಮ ದುರಾದೃಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ಗೆ ಬೆಂಬಲವಾಗಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನಾ ಧರಣಿ ನಡೆಸಿದ ಮಂಡ್ಯ ಯೂಥ್ ಗ್ರೂಪ್ನ ಸದಸ್ಯರನ್ನು ಶುಕ್ರವಾರ ಭೇಟಿ ಮಾಡಿದ ನಂತರ ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗುವವರಿದ್ದರು. [ಅಂತರ್ಜಾಲದಲ್ಲಿ ಕಾವೇರಿಗಾಗಿ ಹರಿದಾಡಿದ ಬೆಸ್ಟ್ ಟ್ರಾಲ್ಸ್]

ಕರ್ನಾಟಕದ ವಕೀಲ ನಾರಿಮನ್ ತೋರಿದ ಮಾನವೀಯತೆಯನ್ನು ತಮಿಳುನಾಡು ದುರುಪಯೋಗ ಪಡಿಸಿಕೊಂಡಿದೆ. ತಮಿಳುನಾಡಿನಲ್ಲಿ ನೀರಿನ ಕೊರತೆ ಇರುವುದರಿಂದ ಮಾನವೀಯತೆ ಆಧಾರದ ಮೇಲೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವುದಾಗಿ ನಾರಿಮನ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಇದನ್ನು ಆಧಾರ ಮಾಡಿಕೊಂಡು ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ನ್ಯಾಯಾಲಯ ಆದೇಶಿಸಿದೆ. ಇದು ಕನ್ನಡಿಗರ ಗಾಯದ ಮೇಲೆ ಎಳೆದ ಬರೆ ಎಂದು ಅವರು ಬಣ್ಣಿಸಿದರು.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕರ್ನಾಟಕ ಇಂತಹ ಪರಿಸ್ಥಿತಿ ಎದುರಿಸುತ್ತಿದೆ. ಕಳೆದ ಹತ್ತು ವರ್ಷದಿಂದ ಸರಾಸರಿ 300 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಟ್ಟಿದೆ. ಇಷ್ಟು ಪ್ರಮಾಣದಲ್ಲಿ ನೀರು ಬಿಟ್ಟರೂ ಸಂಕಷ್ಟ ಸಂದರ್ಭದಲ್ಲಿ ಕರ್ನಾಟಕದ ಪರ ನಿಲ್ಲುವ ಗುಣ ತಮಿಳುನಾಡಿಗೆ ಇಲ್ಲ ಎಂದು ದೇವೇಗೌಡರು ವಿಷಾದ ವ್ಯಕ್ತಪಡಿಸದರು. [ಮಂಡ್ಯದಲ್ಲಿ ಶೇ90ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]

ಪ್ರತಿ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕಾವೇರಿ ನದಿಗೆ ಹೆಚ್ಚಿನ ಅಚ್ಚುಕಟ್ಟು ಪ್ರದೇಶ ಕರ್ನಾಟಕದಲ್ಲೇ ಇದೆ. ಮಂಡ್ಯ, ಮೈಸೂರು, ಕನಕಪುರ ಹಾಗೂ ಚೆನ್ನಪಟ್ಟಣ ಈ ನದಿ ನೀರಿನ ಮೇಲೆ ಕೃಷಿ ಹಾಗೂ ಕುಡಿಯುವ ನೀರಿಗಾಗಿ ಅವಲಂಬಿಸಿದ್ದಾರೆ. ತಮಿಳುನಾಡಿನ ಈ ವರ್ತನೆಯಿಂದ ಈ ಭಾಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಗೌಡರು ಆತಂಕ ವ್ಯಕ್ತಪಡಿಸಿದರು.
ಈ ಭಾಗದ ಜನರ ಸಂಕಷ್ಟವನ್ನು ಸಮರ್ಥವಾಗಿ ನ್ಯಾಯಾಲಯಗಳ ಮುಂದೆ ಮಂಡಿಸುವ ಸಾಮರ್ಥ್ಯವುಳ್ಳ ವಕೀಲರು ಬೇಕಾಗಿದ್ದಾರೆ. ಇಲ್ಲದಿದ್ದರೆ ಕರ್ನಾಟಕದ ಹಿತವನ್ನು ಯಾರೂ ಕಾಪಾಡಲಾರರು ಎಂದು ಮಾಜಿ ಪ್ರಧಾನಿ ಬೇಸರ ವ್ಯಕ್ತಪಡಿಸಿದರು. [ತಿರುಗಿಯೂ ನೋಡದ ಅಂಬಿ, ಪದ್ಮಾವತಿಯೂ ನಾಪತ್ತೆ!]
ಈ ಸಂದರ್ಭದಲ್ಲಿ ಮಂಡ್ಯ ಯೂಥ್ ಗ್ರೂಪ್ನ ಅಧ್ಯಕ್ಷರಾದ ಡಾ. ಅನಿಲ್ ಆನಂದ್, ಉಪಾಧ್ಯಕ್ಷರಾದ ಎಚ್.ಎಸ್.ಮಂಜು, ಸದಸ್ಯರಾದ ದೇವೇಂದ್ರ ಗುಪ್ತ, ರುದ್ರಪ್ಪ ಎಸ್ ಹಾಗೂ ಡಾ. ಯಾಶೀಕಾ ಅನಿಲ್ ಮೊದಲಾದವರು ಇದ್ದರು.
ಕಾವೇರಿ ಹೋರಾಟದ ಸದ್ದು ದೇಶದ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಪ್ರತಿಧ್ವನಿಸಿತು. ಮಂಡ್ಯ ಯೂಥ್ ಗ್ರೂಪ್ ಜಂತರ್ ಮಂತರ್ನಲ್ಲಿ ಪ್ರತಿಭಟನಾ ಧರಣಿ ನಡೆಸಿ, ಕಾವೇರಿ ವಿಚಾರದಲ್ಲಿ ತಮಿಳುನಾಡು ಸರ್ಕಾರದ ಹಠಮಾರಿ ಧೋರಣೆಯನ್ನು ಖಂಡಿಸಿತು. ಜತೆಗೆ, ರಾಜ್ಯದ ಜಲಾಶಯಗಳು ಬರಿದಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡದಂತೆ ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು.












Click it and Unblock the Notifications