ಪರಾರಿಯಾಗಲು ಯತ್ನಿಸಿದ 8 ತಬ್ಲೀಗ್ ಜಮಾತ್ ಸದಸ್ಯರ ಬಂಧನ
ನವದೆಹಲಿ, ಏಪ್ರಿಲ್ 05 : ಪೊಲೀಸರು ಕಣ್ಣು ತಪ್ಪಿಸಿ ಮಲೇಷ್ಯಾಕ್ಕೆ ಹೊರಟಿದ್ದ 8 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರು ವೀಸಾ ನಿಯಮ ಉಲ್ಲಂಘನೆ ಮಾಡಿ ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು.
ಭಾರತದಲ್ಲಿ ಸಿಲುಕಿರುವ ಮಲೇಷ್ಯಾ ಪ್ರಜೆಗಳನ್ನು ಸ್ಥಳಾಂಂತರ ಮಾಡಲು ಅಲ್ಲಿನ ಸರ್ಕಾರ ವಿಮಾನವನ್ನು ಸಿದ್ಧಪಡಿಸಿತ್ತು. ದೆಹಲಿಯಿಂದ 30 ಪ್ರಜೆಗಳು ಇದರಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಈ ಪೈಕಿ 8 ಮಂದಿ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಎಂಬುದನ್ನು ಇಮಿಗ್ರೇಷನ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಗುರುವಾರ 12.40ಕ್ಕೆ ದೆಹಲಿ-ಮುಂಬೈ ಮೂಲಕ ವಿಮಾನ ಮಲೇಷ್ಯಾಕ್ಕೆ ಹೊರಡಬೇಕಿತ್ತು. ತಕ್ಷಣ 8 ಜನರನ್ನು ಕೆಳಗಿಳಿಸಲಾಗಿದೆ. ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 22 ಪ್ರಯಾಣಿಕರು ವಿಮಾನದಲ್ಲಿ ಮಲೇಷ್ಯಾಕ್ಕೆ ತೆರಳಿದರು.

ಪ್ರವಾಸಿ ವೀಸಾ ಪಡೆದು ಬಂದು ಭಾರತದಲ್ಲಿ ಮಿಷನರಿ ಚಟುವಟಿಕೆಯಲ್ಲಿ ತೊಡಗಿದ್ದ ವಿದೇಶಿಯರನ್ನು ಭಾರತ ಕಪ್ಪು ಪಟ್ಟಿಗೆ ಸೇರಿಸುತ್ತಿದೆ. ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ 960 ವಿದೇಶಿಯರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಭಾರತದ ಅಧಿಕಾರಿಗಳ ಕಣ್ಣು ತಪ್ಪಿಸಿ ಮಲೇಷ್ಯಾಕ್ಕೆ ತೆರಳಲು ಸಿದ್ಧರಾಗಿದ್ದ 8 ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎಲ್ಲರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ 10 ಇಂಡೋನೇಷ್ಯಾ ಪ್ರಜೆಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇವರಲ್ಲಿ ಐವರು ಮಹಿಳೆಯರು ಸೇರಿದ್ದಾರೆ.












Click it and Unblock the Notifications