ಕಾವೇರಿ ನೀರು ಹಂಚಿಕೆ: ರಾಜ್ಯಕ್ಕೆ ಶಾಕ್ ನೀಡಿದ ಸುಪ್ರೀಂ ಕೋರ್ಟ್
ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆಗೆ ಸುಪ್ರೀಂ ಕೋರ್ಟ್ ನಿರ್ಧಾರ. ಸರ್ವೋಚ್ಛ ನ್ಯಾಯಾಲಯದ ತೀರ್ಮಾನಕ್ಕೆ ಕೇಂದ್ರದ ಆಕ್ಷೇಪ.
ನವದೆಹಲಿ, ಸೆಪ್ಟೆಂಬರ್ 20: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸರ್ವೋಚ್ಛ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದೆ. ಹೊಸದಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಒಲವು ತೋರಿದ್ದು, ಇದು ರಾಜ್ಯ ಸರ್ಕಾರವನ್ನು ಹೊಸ ಇಕ್ಕಟ್ಟಿಗೆ ತಂದು ನಿಲ್ಲಿಸಲಿದೆ.
ಈಗಾಗಲೇ ಕಾವೇರಿ ನ್ಯಾಯಾಧೀಕರಣದಿಂದ ಸಾಕಷ್ಟು ನೋವು, ನಿರಾಸೆ ಅನುಭವಿಸಿದ್ದ ರಾಜ್ಯ ಸರ್ಕಾರ ಈಗ ಹೊಸತೊಂದು ಸಾಂವಿಧಾನಿಕ ಪೀಠದಿಂದ ಮತ್ತೊಂದು ರೀತಿಯ ಕಿರುಕುಳ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ತಮಿಳುನಾಡು ಸರ್ಕಾರ, ನೀರು ಹಂಚಿಕೆ ವಿಚಾರದಲ್ಲಿ ಪ್ರತ್ಯೇಕ ಪ್ರಾಧಿಕಾರ ಅಥವಾ ಮಂಡಳಿ ರಚನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿತ್ತು. ಈ ಮನವಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಪ್ರತ್ಯೇಕ ನಿರ್ವಹಣಾ ಮಂಡಳಿ ರಚಿಸುವುದಾಗಿ ತಿಳಿಸಿದೆ.
ತನ್ನ ಅನಿಸಿಕೆಯನ್ನು ಸಮರ್ಥಿಸಿಕೊಂಡ ನ್ಯಾ. ದೀಪಕ್ ಮಿಶ್ರಾ ಅವರುಳ್ಳ ತ್ರಿಸದಸ್ಯ ಪೀಠ, 'ಈಗಾಗಲೇ ನರ್ಮದಾ ನದಿ ಸೇರಿದಂತೆ ದೇಶದಲ್ಲಿ ವಿವಾದಕ್ಕೀಡಾಗಿರುವ ಕೆಲ ನದಿಗಳ ನೀರನ್ನು ಹಂಚಿಕೆ ಮಾಡಲು ಆಯಾ ನದಿಗಳ ಹೆಸರಲ್ಲೇ ಪ್ರತ್ಯೇಕ ಮಂಡಳಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಹಾಗಾಗಿ, ಕಾವೇರಿ ವಿಚಾರದಲ್ಲೂ ಮಂಡಳಿ ಸ್ಥಾಪಿಸುವುದು ಅನಿವಾರ್ಯವಾಗಿದೆ'' ಎಂದು ತಿಳಿಸಿದೆ.
ಕೇಂದ್ರದ ಆಕ್ಷೇಪ: ಸುಪ್ರೀಂ ಕೋರ್ಟ್ ನ ಈ ನಿಲುವಿಗೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಂಡಳಿ ರಚನೆಯ ಅಧಿಕಾರ ಸಂಸತ್ತಿಗಿರುವುದರಿಂದ ಸುಪ್ರೀಂ ಕೋರ್ಟ್ ಆ ಕಾರ್ಯ ಮಾಡುವ ಅವಶ್ಯಕತೆಯಿಲ್ಲ ಎಂದು ಅದು ವಾದಿಸಿದೆ.












Click it and Unblock the Notifications