ನವೆಂಬರ್ 13ರಂದೇ ಹೊರ ಬೀಳುತ್ತೆ ಅನರ್ಹ ಶಾಸಕರ ಭವಿಷ್ಯ
ದೆಹಲಿ, ನವೆಂಬರ್ 09: 17 ಮಂದಿ ಅನರ್ಹ ಶಾಸಕರ ಭವಿಷ್ಯ ಇನ್ನೇನು ನಾಲ್ಕು ದಿನಗಳಲ್ಲಿ ಹೊರ ಬೀಳಲಿದೆ. ಸುಪ್ರೀಂಕೋರ್ಟ್ ಮೊರೆ ಹೋಗಿರುವ ಅನರ್ಹ ಶಾಸಕರ ರಾಜಕೀಯ ಭವಿಷ್ಯ ತೀರ್ಮಾನವಾಗುವ ದಿನ ಸನ್ನಿಹಿತವಾಗಿದೆ.
ನವೆಂಬರ್ 15ರ ಬದಲು ನವೆಂಬರ್ 13ರಂದೇ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ಕುರಿತು ತೀರ್ಪು ಹೊರಡಿಸಲು ತೀರ್ಮಾನಿಸಲಾಗಿದೆ. ಸುಧೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ. ಎನ್.ವಿ.ರಮಣ್ ನೇತೃತ್ವದ ಪೀಠ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿಸಿತ್ತು. ಆದರೆ, ಪ್ರಕರಣದ ತೀವ್ರತೆಯನ್ನು ಹಿರಿಯ ವಕೀಲ ಮುಕುಲ್ ರೋಹ್ಟಗಿ, ನ್ಯಾಯಮೂರ್ತಿ ಎನ್.ವಿ.ರಮಣ್ ನೇತೃತ್ವದ ಪೀಠದ ಮುಂದೆ ಮಂಡಿಸಿದರು.
ಇದರಿಂದ ಶುಕ್ರವಾರದ ಬದಲು ಬುಧವಾರ ತೀರ್ಪು ಪ್ರಕಟಿಸುವುದನ್ನು ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಎರಡು ಕಡೆ ವಕೀಲರ ವಾದ-ಪ್ರತಿವಾದವನ್ನು ಆಲಿಸಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಬುಧವಾರವೇ ತೀರ್ಪು ಪ್ರಕಟಿಸಲಿದೆ.

ರಾಜ್ಯದಲ್ಲಿ ನವೆಂಬರ್ 11ರ ಸೋಮವಾರದಿಂದಲೇ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದರ ಮಧ್ಯೆ ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುವವರೆಗೂ ಅನರ್ಹ ಶಾಸಕರ ಸ್ಥಿತಿ ಅತಂತ್ರವಾಗಿ ಇರಲಿದೆ. ಈ ಹಿನ್ನೆಲೆಯಲ್ಲಿ ತುರ್ತು ತೀರ್ಪು ಪ್ರಕಟಿಸಲು ವಕೀಲರು ಮನವಿ ಮಾಡಿದ್ದಾರೆ. ಹೀಗಾಗಿ ಅಗತ್ಯ ದಾಖಲೆಗಳನ್ನು ಆದಷ್ಟು ಬೇಗ ಸಲ್ಲಿಸುವಂತೆ ಕರ್ನಾಟಕದ ಸ್ಪೀಕರ್ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.












Click it and Unblock the Notifications