ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್
ನವದೆಹಲಿ, ಅಕ್ಟೋಬರ್ 10: ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನ ಖರೀದಿಸುವ ಒಪ್ಪಂದದ ನಿರ್ಧಾರ ಕೈಗೊಂಡ ಪ್ರಕ್ರಿಯೆಯ ವಿವರವನ್ನು ಅಕ್ಟೋಬರ್ 29ರ ಒಳಗೆ ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಆದರೆ, ಈ ಒಪ್ಪಂದದ ಪ್ರಕಾರ ವಿಮಾನ ಖರೀದಿಗೆ ತಗುಲುವ ವೆಚ್ಚ ಮತ್ತು ತಾಂತ್ರಿಕ ವಿಚಾರಗಳ ಮಾಹಿತಿ ತನಗೆ ಬೇಡ ಎಂದು ಅದು ಸ್ಪಷ್ಟಪಡಿಸಿದೆ.
ಯುಪಿಎ ಮತ್ತು ಎನ್ಡಿಎ ಸರ್ಕಾರದ ಅವಧಿಗಳಲ್ಲಿ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡ ಒಪ್ಪಂದದ ವಿವರಗಳನ್ನು ಒದಗಿಸುವಂತೆ ಮತ್ತು ಒಪ್ಪಂದದ ಕುರಿತು ತನಿಖೆಗೆ ಆಗ್ರಹಿಸಲು ಹಾಗೂ ಒಪ್ಪಂದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಬುಧವಾರ ವಿಚಾರಣೆ ನಡೆಸಿತು.
ರಾಜಕೀಯ ಲಾಭ ಪಡೆದುಕೊಳ್ಳುವ ಸಲುವಾಗಿ ಈ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತು.

ಭ್ರಷ್ಟಾಚಾರ ಆರೋಪ ಪರಿಗಣಿಸುವುದಿಲ್ಲ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠವು, ರಫೇಲ್ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಅರ್ಜಿದಾರರ ಆರೋಪವನ್ನು ಈಗ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತು.
58 ಸಾವಿರ ಕೋಟಿಯ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಅರ್ಜಿದಾರ ವಕೀಲ ವಿನೀತ್ ದಂಡ ಆರೋಪಿಸಿದ್ದರು.

ನೋಟಿಸ್ ನೀಡುವುದಿಲ್ಲ
ಈ ಸಂಬಂಧ ಸರ್ಕಾರಕ್ಕೆ ಯಾವುದೇ ನೋಟಿಸ್ ನೀಡುತ್ತಿಲ್ಲ. ಅರ್ಜಿದಾರರು ಮಾಡಿರುವ ವಾದಗಳನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಅವರ ವಾದಗಳು ಸಮರ್ಪಕವಾಗಿಲ್ಲ ಎಂದು ಕೋರ್ಟ್ ಹೇಳಿತು.

ರಾಜಕೀಯ ಪ್ರಭಾವ ಸಾಧ್ಯತೆ
ನಿರ್ಧಾರ ಕೈಗೊಳ್ಳುವಿಕೆಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಮಾಹಿತಿಯನ್ನು ಪಡೆದುಕೊಂಡರೆ ಸಾಕು. ಈ ವಿವಾದದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ಯಾವುದೇ ನೋಟಿಸ್ ನೀಡಲು ಮುಂದಾಗುವುದಿಲ್ಲ. ಇದು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ರಾಜಕೀಯ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಭದ್ರತಾ ಸೂಕ್ಷ್ಮತೆ
ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದರಿಂದ ಹಾಗೂ ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ಅನೇಕ ವಿಚಾರಗಳು ಒಳಗೊಂಡಿರುವುದರಿಂದ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದ ಮುಂದಿಟ್ಟರು.

ಎಚ್ಎಎಲ್ಗೆ ರಾಹುಲ್ ಗಾಂಧಿ
ರಫೇಲ್ ವಿವಾದದ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಗೆ (ಎಚ್ಎಎಲ್) ಅಕ್ಟೋಬರ್ 13ರಂದು ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಅವರು ಎಚ್ಎಎಲ್ ನೌಕರರೊಂದಿಗೆ ಮಾತನಾಡಲಿದ್ದಾರೆ. ಬಹುಕೋಟಿ ವೆಚ್ಚದ ರಫೇಲ್ ವಿಮಾನ ಖರೀದಿ ಒಪ್ಪಂದವು ವಿವಾದ ಸೃಷ್ಟಿಸಿರುವುದರಿಂದ ರಾಹುಲ್ ಎಚ್ಎಎಲ್ ಭೇಟಿ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ಹೇರುವ ಸಾಧ್ಯತೆ ಇದೆ.












Click it and Unblock the Notifications