ಪ್ರತಿಭಟನೆಗೆ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿ ಆಕ್ರಮಿಸುವಂತಿಲ್ಲ: ಸುಪ್ರೀಂಕೋರ್ಟ್
ನವದೆಹಲಿ, ಅಕ್ಟೋಬರ್ 7: ದೆಹಲಿಯ ಶಹೀನ್ ಬಾಗ್ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಗಳ ರಾಶಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ ಮತ್ತು ಪ್ರತಿಭಟನೆಗಳನ್ನು ಅವುಗಳಿಗೆ ಮೀಸಲಾದ ಸ್ಥಳಗಳಲ್ಲಿ ಮಾತ್ರವೇ ನಡೆಸಬೇಕು ಎಂದು ಹೇಳಿದೆ.
ಅಂತಹ ರಸ್ತೆತಡೆಯ ಚಟುವಟಿಕೆಗಳನ್ನು ತೆರವುಗೊಳಿವುದು ಆಡಳಿತಾಧಿಕಾರಿಗಳ ಕರ್ತವ್ಯ. ದುರದೃಷ್ಟವಶಾತ್ ಆಡಳಿತದಿಂದ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಸ್ಕೆ ಕೌಲ್, ಕೃಷ್ಣ ಮುರಾರಿ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ, ಅನಿರ್ದಿಷ್ಟಕಾಲ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ. ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವ ಜತೆ ಜತೆಯಲಿ ಸಾಗುತ್ತವೆ. ಆದರೆ ಪ್ರತಿಭಟನೆಗಳು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರವೇ ನಡೆಯಬೇಕು. ಈ ರೀತಿ ಸಾರ್ವಜನಿಕ ಪ್ರದೇಶಗಳನ್ನು ಪ್ರತಿಭಟನೆಗಾಗಿ ಆಕ್ರಮಿಸುವುದನ್ನು ಒಪ್ಪಿಕೊಳ್ಳಲಾಗದು' ಎಂದು ಹೇಳಿತು.

ಸಾರ್ವಜನಿಕ ರಸ್ತೆಗಳನ್ನು ಪ್ರತಿಭಟನೆಗೆ ಬಳಸುವ ಜನರ ಹಕ್ಕು ಹಾಗೂ ಪ್ರತಿಭಟನೆಯ ಹಕ್ಕಿನ ನಡುವೆ ಸಮತೋಲನ ಸಾಧಿಸಬೇಕಾದ ಅಗತ್ಯವಿದೆ ಎಂದು ಸೆ. 21ರಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕು ಆಗಿದ್ದರೂ ಅದು ಕೆಲವು ಸಕಾರಣ ನಿರ್ಬಂಧಗಳಿಗೆ ಒಳಪಟ್ಟಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿತ್ತು.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜನರ ಓಡಾಟ ಮತ್ತು ಗುಂಪುಗೂಡುವಿಕೆಯನ್ನು ದೆಹಲಿ ಪೊಲೀಸರು ನಿರ್ಬಂಧಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾರ್ಚ್ 23ರವರೆಗೆ ನಡೆಯುತ್ತಿದ್ದ 100ಕ್ಕೂ ಹೆಚ್ಚುದಿನಗಳ ಶಹೀನ್ ಬಾಗ್ ಪ್ರತಿಭಟನೆಯನ್ನು ಮೊಟಕುಗೊಳಿಸಲಾಗಿತ್ತು.












Click it and Unblock the Notifications