ಗಾಂಧಿ ಕುಟುಂಬದ ಎಸ್ಪಿಜಿ ವಾಪಸ್: ಮಾಜಿ ಪ್ರಧಾನಿ ಮಗ ಹೇಳಿದ ಕಥೆ
ನವದೆಹಲಿ, ಡಿಸೆಂಬರ್ 3: ವಿಶೇಷ ಭದ್ರತಾ ಗುಂಪಿನ (ಎಸ್ಪಿಜಿ) ಭದ್ರತೆ ಪಡೆದವರಿಗೆ ತಾವೇ ಪ್ರಧಾನಿ ಎಂಬ ಭಾವನೆ ಮೂಡುತ್ತದೆ ಎಂದು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮಗನಾಗಿ 11 ವರ್ಷಗಳಷ್ಟು ಸಮಯ ಎಸ್ಪಿಜಿ ಭದ್ರತೆ ಹೊಂದಿದ್ದ ಬಿಜೆಪಿ ಸಂಸದ ನೀರಜ್ ಶೇಖರ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಂಗಳವಾರ ಎಸ್ಪಿಜಿ (ತಿದ್ದುಪಡಿ) ಮಸೂದೆಯ ಚರ್ಚೆಯ ವೇಳೆ ಮಾತನಾಡಿದ ಅವರು, ಎಸ್ಪಿಜಿಯ ಕುರಿತಾದ ತಮ್ಮ ಅನುಭವ ಹಂಚಿಕೊಂಡರು. ಪ್ರಧಾನಿಯ ಕುಟುಂಬದ ಸದಸ್ಯರಿಗೆ ಗುಂಡು ನಿರೋಧಕ ಕಾರುಗಳಲ್ಲಿ, ಪೊಲೀಸರ ಬೆಂಗಾವಲಿನಲ್ಲಿ ತೆರಳಿ, ಎಲ್ಲ ಭದ್ರತಾ ಪರಿಶೀಲನೆಗಳಿಂದ ಮತ್ತು ಅಡತಡೆಗಳನ್ನು ದಾಟಿ ಹೋಗಬಹುದು. ವಿಮಾನ ನಿಲ್ದಾಣದಲ್ಲಿಯೂ ಕಡ್ಡಾಯ ತಪಾಸಣೆಗಳಿರುವುದಿಲ್ಲ ಎಂದು ಹೇಳಿದರು.
'ಎಸ್ಪಿಜಿ ಭದ್ರತೆ ಅಡಿ ಬದುಕುತ್ತಿರುವವರು ತಾವೇ ಈ ದೇಶದ ಪ್ರಧಾನಮಂತ್ರಿ ಮತ್ತು ತಾವು ಬಹಳ ವಿಶೇಷ ವ್ಯಕ್ತಿ ಎಂದು ಭಾವಿಸುತ್ತಾರೆ' ಎಂದ ಅವರು, ಬಿಜೆಪಿಯು ಈ ವಿಐಪಿ ಸಂಸ್ಕೃತಿಯನ್ನು ಅಂತ್ಯಗೊಳ್ಳಲು ಬಯಸಿದೆ ಎಂದು ಮಸೂದೆಯನ್ನು ಬೆಂಬಲಿಸಿದರು.

ಬುಲೆಟ್ ಪ್ರೂಫ್ ಕಾರ್
'ಮಸೂದೆಗೆ 1991ರಲ್ಲಿ ತಿದ್ದುಪಡಿ ಮಾಡಿದ್ದಾಗ ನಾನೂ ಕೂಡ ಎಸ್ಪಿಜಿ ಭದ್ರತೆ ಪಡೆದುಕೊಂಡಿದ್ದೆ. ಅದು ಅಗತ್ಯವಿರಲಿಲ್ಲ. ಆದರೆ 22 ವರ್ಷದ ಯುವಕನಾಗಿದ್ದ ನನಗೆ ಅದು ಇಷ್ಟವಾಗಿತ್ತು. ನನಗೆ ನೆರಳಿನಂತೆ ಭದ್ರತಾ ಸಿಬ್ಬಂದಿಯೊಬ್ಬರು ಇರುತ್ತಿದ್ದರು. ನಾನು ವಿಮಾನ ನಿಲ್ದಾಣಕ್ಕೆ ಹೋದಾಗಲೆಲ್ಲಾ ನನ್ನ ಕಾರ್ ವಿಮಾನದ ಬಳಿಗೆ ಹೋಗುತ್ತಿತ್ತು. ನಾನೆಲ್ಲಿಗೆ ಭೇಟಿ ನೀಡಿದರೂ ಬುಲೆಟ್ ಪ್ರೂಫ್ ಕಾರ್ನಲ್ಲಿ ಹೋಗುತ್ತಿದ್ದೆ. ಯಾರೂ ನನ್ನನ್ನು ಗುರುತಿಸಿದೆ ಇದ್ದರೂ ನಾಲ್ಕು ಕಾರ್ಗಳ ಭದ್ರತೆ ನಡುವೆ ಹೋಗುತ್ತಿದ್ದೆ' ಎಂದು ಅವರು ತಿಳಿಸಿದರು.

ಪ್ರಧಾನಿಯೇ ನಾನು ಎಂಬ ಭಾವನೆ
ಮೇಲ್ಮನೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ ನೀರಜ್ ಶೇಖರ್, ನಾನು ಏನೂ ಅಲ್ಲದೆ ಇದ್ದರೂ ಜನರು ನನ್ನ ಬಳಿ ಆಟೋಗ್ರಾಫ್ ಹಾಕಿಸಿಕೊಳ್ಳಲು ಜನರು ಬರುತ್ತಿದ್ದರು. ಎಸ್ಪಿಜಿಯು ನಾನೊಬ್ಬ ಯಾವುದೋ ವಿಶೇಷ ವ್ಯಕ್ತಿ ಎಂಬ ಭಾವನೆ ಮೂಡಿಸಿತ್ತು ಎಂದು ಹೇಳಿದರು.
'ಹಿರಿಯ ನಾಗರಿಕರು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗಾಗಿ ನಿಂತದ್ದು ನೋಡಿ ಅಚ್ಚರಿಯಾಗುತ್ತಿತ್ತು. ನಾನು ಆಗ ಎಂದೂ ಭದ್ರತಾ ತಪಾಸಣೆಗೆ ಒಳಪಟ್ಟಿರಲಿಲ್ಲ. ನನಗೆ ವಿಮಾನದವರೆಗೂ ಪಿಸ್ತೂಲು ಹಿಡಿದ ಭದ್ರತಾ ಸಿಬ್ಬಂದಿಯ ಕಾವಲು ಇರುತ್ತಿತ್ತು.
ತಮ್ಮ ತಂದೆ ಚಂದ್ರಶೇಖರ್ ತಮಿಳುನಾಡಿನ ಡಿಎಂಕೆ ಸರ್ಕಾರ ವಜಾಗೊಳಿಸಿದ ಸಂದರ್ಭದಲ್ಲಿ ತಮಿಳುನಾಡಿಗೆ ಭೇಟಿ ನೀಡಿದ್ದಾಗ, ಅಲ್ಲಿ ಇಳಿದ ವೇಳೆ ಹಿಂದೆಂದೂ ನೋಡಿರದ ಭದ್ರತೆ ನೋಡಿದೆ. ನನಗೆ 10-15 ವಾಹನಗಳಿದ್ದವು. ಆಗ ನನಗೆ ಭಾರತದ ಪ್ರಧಾನಿಯೇ ಅಲ್ಲಿ ಇದ್ದಂತೆ ಅನಿಸಿತು ಎಂದು ವಿವರಿಸಿದರು.

ನನ್ನ ಜತೆ ದೊಡ್ಡ ಸೈನ್ಯವೇ ಇರುತ್ತಿತ್ತು
2001ರಲ್ಲಿ ಸಂಸತ್ ಸದಸ್ಯನಾದಾಗಿನಿಂದ ತಾವು ಅಂತ ಭದ್ರತೆ ಪಡೆದುಕೊಂಡಿಲ್ಲ ಎಂದು ತಿಳಿಸಿದರು.
'ಈ ಭದ್ರತೆಗೆ ವಿನಿಯೋಗಿಸುವ ಹಣದ ಬಗ್ಗೆ ಕೆಲವೊಮ್ಮೆ ನನಗೆ ಅಚ್ಚರಿಯಾಗುತ್ತಿತ್ತು. ಕೆಲವೊಮ್ಮೆ ನನ್ನ ಅಮ್ಮ ಮತ್ತು ಸಹೋದರನ ಜತೆ ಹೊರಗೆ ಪ್ರಯಾಣಿಸುವಾಗ ದೊಡ್ಡ ಸೈನ್ಯವೇ ನಮ್ಮ ಜತೆ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಸುಮಾರು ಒಂಬತ್ತು ವಾಹನಗಳು ನಮ್ಮ ಜತೆ ಬರುತ್ತಿದ್ದವು. ದೆಹಲಿ ಪೊಲೀಸರ 14-15 ವಾಹನಗಳು ಕೂಡ ನಮ್ಮನ್ನು ಹಿಂಬಾಲಿಸುತ್ತಿದ್ದವು' ಎಂದು ನೆನಪಿಸಿಕೊಂಡರು.

ಬೇರೆ ರೀತಿ ರಕ್ಷಣೆ ಒದಗಿಸಿ
ವಿಶೇಷ ಕಾರ್ಗಳನ್ನು ವಿಮಾನದಲ್ಲಿ ರವಾನಿಸಲಾಗುತ್ತಿತ್ತು. ಮತ್ತು ನಾವು ಪ್ರಯಾಣಿಸುವ ಸ್ಥಳಕ್ಕೆ ಮೊದಲೇ ಭದ್ರತಾ ತಂಡ ತೆರಳಿರುತ್ತಿತ್ತು. ಈ ಮಸೂದೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ನನ್ನಂತಹ ವ್ಯಕ್ತಿಗೆ ಅಂತಹ ಭದ್ರತೆಯ ಅಗತ್ಯವಿಲ್ಲ. ಆದರೆ ಮಾಜಿ ಪ್ರಧಾನಿಗಳು ಮತ್ತು ಅವರ ಕುಟುಂಬದವರಿಗೆ ಬೇರೊಂದು ಪಡೆಯ ಮೂಲಕ ರಕ್ಷಣೆ ಒದಗಿಸುವುದು ಅಗತ್ಯವಿದೆ ಎಂದೂ ಅವರು ಹೇಳಿದರು.
ಚಂದ್ರಶೇಖರ್ ಅವರು 1990ರ ನವೆಂಬರ್ 10ರಿಂದ 1991ರ ಜೂನ್ 21ರವರೆಗೆ ಪ್ರಧಾನಿಯಾಗಿದ್ದರು. ಅವರ ಮಗನಾದ ನೀರಜ್ ಶೇಖರ್, ಈ ವರ್ಷದ ಜುಲೈನಲ್ಲಿ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.












Click it and Unblock the Notifications