ಸೋನಿಯಾ ರಕ್ಷಣಾ ಸಿಬ್ಬಂದಿ ದಯನೀಯ ಸ್ಥಿತಿಯಲ್ಲಿ ಪತ್ತೆ
ನವದೆಹಲಿ, ಸೆ. 07: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಕ್ಷಣೆಗಾಗಿ ನಿಯೋಜಿತರಾಗಿದ್ದ ಎಸ್ಪಿಜಿ ಯೋಧ ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಸುದ್ದಿ ಓದಿರುತ್ತೀರಿ. ಈಗ ಈ ಯೋಧ ದೆಹಲಿಯಲ್ಲಿ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದೆಹಲಿಯ ತಿಲಕ್ ಮಾರ್ಗ್ ಬಳಿ ಆಹಾರ, ನೀರು ಬೇಡುವ ಸ್ಥಿತಿಯಲ್ಲಿ ರಕ್ಷಣಾ ಸಿಬ್ಬಂದಿ ರಾಕೇಶ್ ಕುಮಾರ್ ಕಂಡು ಬಂದಿದ್ದಾರೆ.

ರಾಕೇಶ್ ಬಳೀ ಎಸ್ಪಿಜಿ ಕಮ್ಯಾಂಡೋ ಐಡಿ ಕಾರ್ಡ್ ಇರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು ಬಂದು ವಿಚಾರಿಸಿದಾಗ, ಈತನೇ ರಾಕೇಶ್ ಕುಮಾರ್ ಎಂಬುದು ಸಾಬೀತಾಗಿದೆ.
ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಕೇಶ್ ಅವರು ಸುಮಾರು 4 ಲಕ್ಷ ರು ಸಾಲ ಪಡೆದಿದ್ದರು. ಆಗಸ್ಟ್ 31ರಂದು ಸಾಲದ ಕಂತು 40 ಸಾವಿರ ರೂಪಾಯಿ ಪಾವತಿಸಬೇಕಿತ್ತು. ಆದರೆ, ತನ್ನ ಬಳಿ ಹಣ ಇಲ್ಲದಿರುವುದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಒದ್ದಾಡಿದ್ದಾರೆ.
ಸೋನಿಯಾ ಗಾಂಧಿ ಅವರ 10, ಜನಪಥ ನಿವಾಸದಲ್ಲಿ ಭದ್ರತೆಗಾಗಿ ನಿಯೋಜಿಸಿದ ಸಿಬ್ಬಂದಿಗಳ ಪೈಕಿ ರಾಕೇಶ್ ಕುಮಾರ್ ಕೂಡಾ ಒಬ್ಬರು. ಸೆಪ್ಟೆಂಬರ್ 1 ರಂದು ಕರ್ತವ್ಯಕ್ಕೆ ಹಾಜರಾಗಿ ನಂತರ ಹೊರಗೆ ಹೋದವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ಫೋನ್ ಕಚೇರಿಯಲ್ಲೇ ಬಿಟ್ಟಿದ್ದರು. ರಾಕೇಶ್ ಕುಮಾರ್ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.











Click it and Unblock the Notifications