ಆತ್ಮಹತ್ಯೆಗೆ ಪ್ರಚೋದನೆ ಆರೋಪ, ಎಎಪಿ ಶಾಸಕ ಬಂಧನ
ನವದೆಹಲಿ, ಜುಲೈ 31: ಓಕ್ಲಾದ ಎಎಪಿ ಶಾಸಕ ಅಮಾನುತುಲ್ಲಾ ಖಾನ್ ಅವರ ಬಂಧನದ ಬೆನ್ನಲ್ಲೇ ಮತ್ತೊಬ್ಬ ಶಾಸಕ ಶರದ್ ಚೌಹಣ್ ರನ್ನು ಭಾನುವಾರ ಬೆಳಗ್ಗೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪಕ್ಷದ ಕಾರ್ಯಕರ್ತೆ ಸೋನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಶಾಸಕ ಶರದ್ ಹೊತ್ತಿದ್ದಾರೆ. ಕಳೆದ ಬುಧವಾರ ಆಪ್ ಕಾರ್ಯಕರ್ತ ರಮೇಶ್ ಭಾರದ್ವಾಜ್ ಅವರನ್ನು ಬಂಧಿಸಲಾಗಿತ್ತು.
ದೆಹಲಿಯ ಹೊರ ವಲಯದ ನೆರೆಲಾ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಯಕರ್ತೆ ಸೋನಿ ಜುಲೈ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳು ಸೋನಿ ಸಾವಿಗೆ ಸ್ಥಳೀಯ ಶಾಸಕ ಹಾಗೂ ಅತನಕ ಬೆಂಬಲಿಗರೇ ಕಾರಣ ಎಂದು ಪೋಷಕರು ದೂರು ನೀಡಿದ್ದರು. ಶಾಸಕರ ಕಿರಿಕಿರಿಯಿಂದ ಸೋನಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು.
ಸೋನಿ ಆತ್ಮಹತ್ಯೆಗೂ ಮುನ್ನ ವಾಟ್ಸ್ಆಪ್ನಲ್ಲಿ ದಾಖಲಿಸಿದ ವಿಡಿಯೋ ಕ್ಲಿಪ್ನಲ್ಲಿ ಭಾರದ್ವಾಜ್, ಅಮಿತ್ ಕುಮಾರ್ ಮತ್ತು ರಜನಿಕಾಂತ್ ಅವರು ತಾನು ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿದ್ದರು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಜೂನ್ 2ರಂದು ಪ್ರಕರಣ ದಾಖಲಾಗಿತ್ತು.
ಆಮ್ ಆದ್ಮಿ ಪಕ್ಷದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಕಿರುಕುಳ ಪ್ರಕರಣಗಳು ಕೇಳೀ ಬರುತ್ತಿವೆ. ಕಾರ್ಯಕರ್ತೆಯ ಸಾವಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಶಾಸಕ ಶರದ್ ಚೌಹಾನ್ ಹಾಗೂ ರಮೇಶ್ ವಾದ್ವಾ ಎಲ್ಲರೂ ಕಾರಣ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ ಉಪಾಧ್ಯಾಯ ಆಪಾದಿಸಿದ್ದಾರೆ.