ಸ್ನಾಪ್ ಡೀಲ್ ದೀಪ್ತಿ ಕಿಡ್ನಾಪಿಗೆ ಶಾರುಖ್ ಸಿನ್ಮಾ ಸ್ಫೂರ್ತಿ?
ನವದೆಹಲಿ, ಫೆ.15: ಇ ಕಾಮರ್ಸ್ ಸಂಸ್ಥೆ ಸ್ನಾಪ್ ಡೀಲ್ ನ ಮಹಿಳಾ ಉದ್ಯೋಗಿ ದೀಪ್ತಿ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿತ್ತು. ಆದರೆ, ಕಚೇರಿಯಿಂದ ಮನೆಗೆ ತೆರಳುವಾಗ ನಾಪತ್ತೆಯಾಗಿದ್ದ ದೀಪ್ತಿಯನ್ನು ಕಿಡ್ನಾಪ್ ಮಾಡಿದ್ದು ಯಾರು? ಏಕೆ? ಈ ಬಗ್ಗೆ ದೀಪ್ತಿ ಹೇಳಿದ್ದೇನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಸತ್ಯ ಹೊರಬಂದಿದ್ದು, ಶಾರುಖ್ ಅವರ 'ಡರ್' ಚಿತ್ರದ ಮಾದರಿಯಲ್ಲಿ ಸೈಕೋ ಪ್ರೇಮಿಯೊಬ್ಬ ಮಾಡಿದ ಕೃತ್ಯ ಇದು ಎಂದು ತಿಳಿದು ಬಂದಿದೆ.
ಗಾಜಿಯಾಬಾದಿನ ಎಸ್ ಪಿ ಧರ್ಮೇಂದ್ರ ಸಿಂಗ್ ಅವರು ಈ ಪ್ರಕರಣದ ಬಗ್ಗೆ ವಿವರಣೆ ನೀಡಿದ್ದಾರೆ. ಸೈಕೋಪಾತ್ ಒಬ್ಬ ದೀಪ್ತಿ ಅವರ ಹಿಂದೆ ಬಿದ್ದಿದ್ದ. ಈ ವಿಷಯ ದೀಪ್ತಿ ಅವರಿಗೂ ತಿಳಿದಿರಲಿಲ್ಲ. ನಾಪತ್ತೆ ಪ್ರಕರಣಕ್ಕೆ ಶಾರುಖ್ ಖಾನ್ ಅವರ ಡರ್ ಚಿತ್ರವೇ ಸ್ಪೂರ್ತಿ ನೀಡಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.[ಸ್ನಾಪ್ ಡೀಲ್ ದೀಪ್ತಿ: ದೆಹಲಿಯಲ್ಲಿ ನಾಪತ್ತೆ ಹರ್ಯಾಣದಲ್ಲಿ ಪತ್ತೆ]
ಒನ್ ಸೈಡ್ ಲವರ್ ಒಬ್ಬ ಬಾಲಿವುಡ್ ಸಿನಿಮಾ ಡರ್ ನಲ್ಲಿ ಆಡಿದಂತೆ ಆಡುತ್ತಾ, ಕಲ್ಪನಾ ಲೋಕದಲ್ಲಿ ದೀಪ್ತಿ ಅವರನ್ನು ಪ್ರೀತಿಸುತ್ತಿದ್ದ. ಆಟೋರಿಕ್ಷಾ ಚಾಲಕರ ನೆರವು ಪಡೆದುಕೊಂಡು ಈ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಇನ್ನೂ ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಆದರೆ, ಮಾಸ್ಟರ್ ಮೈಂಡ್ ಯಾರು ಎಂಬುದು ತಿಳಿದಿಲ್ಲ.

ಕ್ರೈಂ ಸೀನ್ ನಡೆದ ರೀತಿ ಬಗ್ಗೆ ವಿವರಣೆ
ಆರೋಪಿಗಳ ಬಂಧನಕ್ಕೂ ಮುನ್ನ ದೀಪ್ತಿ ಅವರನ್ನು ಕ್ರೈಂ ಸೀನ್ ನಡೆದ ರೀತಿಯನ್ನು ವಿವರಿಸಲು ಕೇಳಲಾಯಿತು. ಭಾನುವಾರ ಸಂಜೆ ದೀಪ್ತಿ ಅವರು ಓಡಾಡಿದ ಜಾಗ ಹಿಂಡೋನ್ ನಿಂಡ ಮೋರ್ತಿ ಗ್ರಾಮದ ತನಕ ತನಿಖಾ ತಂಡ ಹಿಂಬಾಲಿಸಿ ಪೂರ್ತಿ ಯೋಜನೆಯನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ದಿನ ದೀಪ್ತಿ ಅವರು ಹತ್ತಿದ್ದ ಆಟೋರಿಕ್ಷಾ ಚಾಲಕನನ್ನು ವಿಚಾರಣೆಗೊಳಪಡಿಸಲಾಗಿದೆ.

ಪರಿಚಿತರಿಂದಲೇ ಕೃತ್ಯ ನಡೆದಿದೆ
ನಾನು ಯಾವ ಚಿಪ್ಸ್ ತಿನ್ನುತ್ತೇನೆ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಪರಿಚಿತರೇ ಇರಬಹುದು ಎಂದು ದೀಪ್ತಿ ಹೇಳಿದ್ದಾರೆ. ಆದರೆ, ಯಾರ ಮೇಲೂ ಅನುಮಾನ ಬರುತ್ತಿಲ್ಲ ಎಂದಿದ್ದಾರೆ. ಪೊಲೀಸರು ದೀಪ್ತಿ ಅವರ ಕಚೇರಿ, ಸ್ನೇಹಿತರು, ಪ್ರತಿ ನಿತ್ಯ ಓಡಾಡುವ ಪ್ರದೇಶದಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ.

ವೃತ್ತಿಪರ ಕಿಡ್ನಾಪರ್ಸ್ ಅಲ್ಲವೇ ಅಲ್ಲ
ವೃತ್ತಿಪರ ಕಿಡ್ನಾಪರ್ಸ್ ಮಾಡಿದ ಕೃತ್ಯವಲ್ಲ. ದೀಪ್ತಿ ಅವರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಯಾವುದೇ ಬೇಡಿಕೆ ಇಟ್ಟಿಲ್ಲ. ದೆಹಲಿಗೆ ಹೋಗುವ ರೈಲು ಬರುವ ನಿಲ್ದಾಣಕ್ಕೆ ಆಕೆಯನ್ನು ತಂದು ಬಿಟ್ಟು ಹೋಗಿದ್ದಾರೆ. ನೂರು ರುಪಾಯಿ ನೋಟು ನೀಡಿದ್ದಾರೆ. ಆದರೆ, ಸೈಕೋಪಾತ್ ಮತ್ತೊಮ್ಮೆ ಈ ರೀತಿ ಕೃತ್ಯ ಅಥವಾ ಯಾವುದೇ ಅನಾಹುತ ಮಾಡುವ ಮುನ್ನ ತಡೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಜಾಗೃತಿ
ಶುಕ್ರವಾರ ಬೆಳಗ್ಗೆ ತನ್ನ ತಂದೆಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿದ್ದ ದೀಪ್ತಿ ಅವರು ವೈಶಾಲಿ ರೈಲ್ವೆ ನಿಲ್ದಾಣಕ್ಕೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ದೀಪ್ತಿ ಪೋಷಕರು ತಮ್ಮ ಮಗಳನ್ನು ಮನೆಗೆ ಕರೆ ತಂದಿದ್ದರು. ದೀಪ್ತಿ ನಾಪತ್ತೆಯಾದ ಬಳಿಕ ಸ್ನಾಪ್ ಡೀಲ್ ಸಂಸ್ಥೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.












Click it and Unblock the Notifications