Breaking: 'ಮಹಾ' ರಾಜಕೀಯ ಬಿಕ್ಕಟ್ಟು: ಸುಪ್ರೀಂನಲ್ಲಿ ಬಂಡಾಯ ಶಾಸಕರ ಅರ್ಜಿ ವಿಚಾರಣೆ ಆರಂಭ
ಮುಂಬೈ, ಜೂನ್ 27 : ಬಂಡಾಯ ಶಾಸಕ ಏಕನಾಥ್ ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಿದ ಶಿವಸೇನೆಯ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ತಂಡವೂ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ಆರಂಭವಾಗಿದೆ.
ಸಂಜೆ ಉದ್ಧವ್ ಠಾಕ್ರೆ ಭಾಷಣ:
ಸೋಮವಾರ ಸಂಜೆ 6 ಗಂಟೆಗೆ ಮಹಾರಾಷ್ಟ್ರವನ್ನು ಉದ್ದೇಶಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾಷಣ ಮಾಡಲಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಸುಪ್ರೀಂಕೋರ್ಟ್ ನೀಡುವ ಆದೇಶದ ಮೇಲೆ ಉದ್ದವ್ ಮುಂದಿನ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಏಕನಾಥ್ ಶಿಂಧೆ ಮತ್ತು ಬಂಡಾಯ ಶಾಸಕರ ಪರವಾಗಿ ಹರೀಶ್ ಸಾಳ್ವೆ ವಾದ ಮಂಡಿಸುತ್ತಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಶಿವಸೇನೆ ಪರವಾಗಿ ಅಭಿಷೇಕ್ ಸಿಂಘ್ವಿ ವಾದ ಮಂಡಿಸುತ್ತಿದ್ದಾರೆ.
ಏಕನಾಥ್ ಶಿಂಧೆ ಮತ್ತು ತಂಡ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿ ಜೆಬಿ ಪ್ರದಿವಾಲಾ ಅವರನ್ನೊಳಗೊಂಡ ಪೀಠವು ಈ ಪ್ರಕರಣವನ್ನು ವಿಚಾರಣೆ ನಡೆಸಲಿದೆ.
ಹಿರಿಯ ವಕೀಲ ರವಿಶಂಕರ ಜಂಧ್ಯಾಲ ಏಕನಾಥ್ ಶಿಂಧೆ ಮತ್ತು ಬಂಡಾಯ ಶಾಸಕರ ವಾದ ಮಂಡಿಸಲಿದ್ದಾರೆ. ಉಪಸಭಾಪತಿ ನರಹರಿ ಜಿರ್ವಾಲ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ತಿರಸ್ಕಾರಕ್ಕೆ ಏಕನಾಥ್ ಶಿಂಧೆ ಪಾಳಯವೂ ಸವಾಲು ಹಾಕಿದ್ದು. ಕಳೆದ ವಾರ ಶಿವಸೇನೆ ಸಲ್ಲಿಸಿದ ಅನರ್ಹತೆಯ ಅರ್ಜಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಝಿರ್ವಾಲ್ ಅವರಿಗೆ ಬಂಡಾಯ ಶಾಸಕರು ಕೋರಿದ್ದಾರೆ.
ಫೆಬ್ರವರಿ 2021 ರಲ್ಲಿ ನಾನಾ ಪಟೋಲೆ ಅವರು ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮಹಾರಾಷ್ಟ್ರ ಅಸೆಂಬ್ಲಿಯ ಸ್ಪೀಕರ್ ಸ್ಥಾನವು ಖಾಲಿಯಾಗಿದೆ ಮತ್ತು ಅನರ್ಹತೆ ಅರ್ಜಿಯ ಮೇಲೆ ತೀರ್ಪು ನೀಡುವ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದೇ ವೇಳೆ ಶಿವಸೇನೆಯ ಕಾನೂನು ಸಲಹೆಗಾರರೂ ಆಗಿರುವ ಹಿರಿಯ ವಕೀಲ ದೇವದತ್ ಕಾಮತ್, ಸ್ಪೀಕರ್ ಅನುಪಸ್ಥಿತಿಯಲ್ಲಿ ತೀರ್ಪು ನೀಡುವ ಎಲ್ಲಾ ಅಧಿಕಾರ ಡೆಪ್ಯುಟಿ ಸ್ಪೀಕರ್ಗೆ ಇದೆ ಎಂದು ಪ್ರತಿಪಾದಿಸಿದ್ದಾರೆ. ಇನ್ನೊಂದು ಪಕ್ಷದೊಂದಿಗೆ ವಿಲೀನವಾದಾಗ ಮಾತ್ರ 2/3 ಬಹುಮತದ ಪರಿಕಲ್ಪನೆ ಅನ್ವಯಿಸುತ್ತದೆ ಎಂದು ಹೇಳಿದರು.
ಕಳೆದ ಐದು ದಿನಗಳಿಂದ ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿ ಹೊಟೇಲ್ನಲ್ಲಿ ಬಂಡಾಯ ಶಾಸಕರು ಬೀಡು ಬಿಟ್ಟಿದ್ದಾರೆ. ತನಗೆ 50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಅವರಲ್ಲಿ ಸುಮಾರು 40 ಮಂದಿ ಶಿವಸೇನೆಯವರು ಎಂದು ಏಕನಾಥ್ ಶಿಂಧೆ ಹೇಳಿಕೊಂಡಿದ್ದಾರೆ.












Click it and Unblock the Notifications