ಕೊಲೆ ಆರೋಪಿ ಎಂದಿದ್ದಕ್ಕೆ ರವಿಶಂಕರ್ಗೆ ಲೀಗಲ್ ನೋಟಿಸ್ ನೀಡಿದ ಶಶಿ ತರೂರ್
ನವದೆಹಲಿ, ನವೆಂಬರ್ 1: ತಮ್ಮನ್ನು ಕೊಲೆ ಆರೋಪಿ ಎಂದು ಕರೆದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬೇಷರತ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
'ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣದಲ್ಲಿ ಶಶಿ ತರೂರ್ ಅವರ ವಿರುದ್ಧದ ಕ್ರಿಮಿನಲ್ ಕೇಸ್ಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮಾಡಿರುವ ಆರೋಪದಲ್ಲಿ ಹತ್ಯೆ ಎಂದು ಪರಿಗಣಿಸಿಲ್ಲ ಮತ್ತು ಅವರ ವಿರುದ್ಧ ಕೋರ್ಟ್ ದೋಷಾರೋಪ ಇನ್ನೂ ನಿಗದಿಪಡಿಸಿಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿಸಿದೆ ಎಂದು ತರೂರ್ ಅವರ ವಕೀಲ ಸೂರಜ್ ಕೃಷ್ಣ ಅವರು ರವಾನಿಸಿರುವ ಲೀಗಲ್ ನೋಟಿಸ್ನಲ್ಲಿ ಹೇಳಲಾಗಿದೆ.
ಶಶಿ ತರೂರ್ ವಿರುದ್ಧ ಪೊಲೀಸರು ಸಲ್ಲಿಸಿರುವ ಚಾರ್ಜ್ಷೀಟ್ನಲ್ಲಿಯೂ ಕೊಲೆಯ ಯಾವ ಆರೋಪವೂ ಇಲ್ಲ. ತರೂರ್ ಅವರನ್ನು ಕೊಲೆ ಆರೋಪಿ ಎಂದು ಚಾರ್ಜ್ಷೀಟ್ನಲ್ಲಿ ಹೇಳಲಾಗಿದೆ ಎಂಬಂತಹ ನಿಮ್ಮ ಹೇಳಿಕೆ ಬೇರೆ ಉದ್ದೇಶಗಳನ್ನು ಹೊಂದಿರುವಂತಿದೆ ಎಂದು ನೋಟಿಸ್ ಹೇಳಿದೆ.

ರವಿಶಂಕರ್ ಪ್ರಸಾದ್ ಅವರು ನನ್ನ ವಿರುದ್ಧ ಮಾಡಿರುವ ಸುಳ್ಳು, ಕಟ್ಟುಕಥೆಯ ಮತ್ತು ಮಾನಹಾನಿಕರ ಹೇಳಿಕೆಯನ್ನು ಇನ್ನೂ ಹಿಂದಕ್ಕೆ ಪಡೆಯದ ಕಾರಣ ನೋಟಿಸ್ ನೀಡಿದ್ದೇನೆ. ಭಾರತದ ಕಾನೂನು ಸಚಿವರು ತಮ್ಮ ರಾಜಕೀಯ ವಿರೋಧಿ ವಿರುದ್ಧ ಕೊಲೆ ಪ್ರಕರಣವನ್ನು ಆರೋಪಿಸಿದರೆ ನ್ಯಾಯಮತ್ತು ಪ್ರಜಾಪ್ರಭುತ್ವಕ್ಕೆ ಯಾವ ಭರವಸೆ ಉಳಿಯುತ್ತದೆ? ಎಂದು ತರೂರ್ ಪ್ರಶ್ನಿಸಿದ್ದಾರೆ.

ಕಾನೂನಿನ ಅಡಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಲು ಯೋಗ್ಯವಾದಂತಹ ಮಾನಹಾನಿಯ ಅಪರಾಧವನ್ನು ಎಸಗಿರುವುದು ಸ್ಪಷ್ಟವಾಗಿದೆ. ಅವರು ನೀಡಿರುವ ಹೇಳಿಕೆಯ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಬೇಕು ಎಂದು ನೋಟಿಸ್ನಲ್ಲಿ ಒತ್ತಾಯಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರವಿಶಂಕರ್ ಪ್ರಸಾದ್ ಅವರು ಶಶಿ ತರೂರ್ ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದರು.












Click it and Unblock the Notifications