ಬಿಜೆಪಿ ಸೇರ್ಪಡೆಯಾದ ಕೆಲವೇ ಗಂಟೆಯಲ್ಲಿ ಶಹೀನ್ ಬಾಗ್ ಶೂಟರ್ ಉಚ್ಚಾಟನೆ
ನವದೆಹಲಿ, ಡಿಸೆಂಬರ್ 30: ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ ವೇಳೆ ದೆಹಲಿಯ ಶಹೀನ್ ಬಾಗ್ನಲ್ಲಿ ಗುಂಡು ಹಾರಿಸುವ ಮೂಲಕ ಕುಖ್ಯಾತನಾಗಿದ್ದ ಕಪಿಲ್ ಗುಜ್ಜರ್ ಎಂಬಾತನನ್ನು ಆತನ 'ಹಿಂದುತ್ವ' ಅಜೆಂಡಾಗಳ ಕಾರಣ ಪಕ್ಷಕ್ಕೆ ಸೇರಿಸಿಕೊಂಡಿದ್ದ ಬಿಜೆಪಿ, ಕೆಲವೇ ಗಂಟೆಗಳಲ್ಲಿ ಉಚ್ಚಾಟನೆ ಮಾಡಿದೆ.
ಶಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದ ಸಮೀಪ ಫೆಬ್ರವರಿಯಲ್ಲಿ ಗುಂಡು ಹಾರಿಸುವ ಮೂಲಕ ಕಪಿಲ್ ಗುಜ್ಜರ್ ಸುದ್ದಿಯಾಗಿದ್ದ. ಘಟನೆ ನಡೆದ ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ.
ಪಕ್ಷದ ಘಾಜಿಯಾಬಾದ್ ಪದಾಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಆತ ಬಿಜೆಪಿ ಸೇರ್ಪಡೆಯಾಗಿದ್ದ. ಆದರೆ ಈ ಬೆಳವಣಿಗೆಯ ಮಾಧ್ಯಮ ವರದಿಗಳು ಪಕ್ಷದ ವರಿಷ್ಠರು ಹಾಗೂ ಹಿರಿಯ ನಾಯಕರ ಗಮನಕ್ಕೆ ಬರುತ್ತಿದ್ದಂತೆಯೇ ಕೆಲವೇ ಗಂಟೆಗಳಲ್ಲಿ ಆತನನ್ನು ಉಚ್ಚಾಟನೆ ಮಾಡಲಾಗಿದೆ.

ಘಾಜಿಯಾಬಾದ್ನ ಪದಾಧಿಕಾರಿಗಳಿಗೆ ಛೀಮಾರಿ ಹಾಕಿರುವ ಹಿರಿಯ ನಾಯಕತ್ವ, ಇದಕ್ಕೆ ವಿವರಣೆ ನೀಡುವಂತೆ ಸೂಚನೆ ನೀಡಿದೆ. ಕಪಿಲ್ ಗುಜ್ಜರ್ನ ಹಿನ್ನೆಲೆ ತನಗೆ ತಿಳಿದಿರಲಿಲ್ಲ. ತಪ್ಪಾಗಿ ಆತನನ್ನು ಪಕ್ಷಕ್ಕೆ ಸ್ವಾಗತಿಸಿದ್ದಾಗಿ ಘಾಜಿಯಾಬಾದ್ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.
'ಬಹುಜನ ಸಮಾಜ ಪಕ್ಷದಿಂದ ಕೆಲವು ಜನರು ಬಿಜೆಪಿ ಸೇರ್ಪಡೆಯಾಗಿದ್ದರು. ಅವರಲ್ಲಿ ಕಪಿಲ್ ಕೂಡ ಒಬ್ಬ. ಆತ ವಿವಾದಾತ್ಮಕ ಶಹೀನ್ ಬಾಗ್ ಘಟನೆಯಲ್ಲಿ ಭಾಗಿಯಾಗಿದ್ದ ಎನ್ನುವುದೇ ನಮಗೆ ತಿಳಿದಿರಲಿಲ್ಲ. ಅದು ತಿಳಿಯುತ್ತಿದ್ದಂತೆಯೇ ತಕ್ಷಣದಿಂದ ಅನ್ವಯವಾಗುವಂತೆ ಆತನ ಸೇರ್ಪಡೆಯನ್ನು ರದ್ದುಗೊಳಿಸಲಾಗಿದೆ' ಎಂದು ಘಾಜಿಯಾಬಾದ್ ಬಿಜೆಪಿ ಮುಖ್ಯಸ್ಥ ಸಂಜೀವ್ ಶರ್ಮಾ ಹೇಳಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಗೆ ಮಾತನಾಡಿದ್ದ ಕಪಿಲ್ ಗುಜ್ಜರ್, ಬಿಜೆಪಿಯು ಹಿಂದುತ್ವಕ್ಕಾಗಿ ಕೆಲಸ ಮಾಡುವುದರಿಂದ ಪಕ್ಷವನ್ನು ಸೇರಿಕೊಂಡಿರುವುದಾಗಿ ಆತ ತಿಳಿಸಿದ್ದ.
ಸಿಎಎ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ಕಪಿಲ್ ಗುಜ್ಜರ್ ಅಲಿಯಾಸ್ ಕಪಿಲ್ ಬೈಸಲಾ, 'ನಮ್ಮ ದೇಶವನ್ನು ಹಿಂದೂಗಳು ಮಾತ್ರವೇ ಆಳುತ್ತಾರೆ, ಬೇರೆ ಯಾರೂ ಆಳುವುದಿಲ್ಲ' ಎಂದು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದರು.












Click it and Unblock the Notifications