ಕೇಜ್ರಿವಾಲ್ ಗೆ ಹಿನ್ನಡೆ: ಜೇಟ್ಲಿ ಮೊಕದ್ದಮೆ ತಡೆಗೆ ಸುಪ್ರೀಂ ನಕಾರ
ನವದೆಹಲಿ, ನವೆಂಬರ್ 22: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಹಿನ್ನಡೆಯಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಹಾಕಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಆದೇಶದೊಂದಿಗೆ ಕೇಜ್ರಿವಾಲ್ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್, ಯು.ಯು.ಲಲಿತ್ ಅವರನ್ನು ಒಳಗೊಂಡ ಪೀಠವು ಕೇಜ್ರಿವಾಲ್ ಪರ ವಕೀಲರಾದ ರಾಮ್ ಜೇಠ್ಮಲಾನಿ ಅವರಿಗೆ ಈ ವಿಷಯ ತಿಳಿಸಿದೆ.[ಜೇಟ್ಲಿ ಹಾಕಿದ ಕೇಸ್ : ಅರವಿಂದ್ ಕೇಜ್ರಿವಾಲ್ ಗೆ ಕೋರ್ಟ್ ನೋಟಿಸ್]
ಕೇಜ್ರಿವಾಲ್ ಮೊದಲಿಗೆ ತಮ್ಮ ವಿರುದ್ಧದ ವಿಚಾರಣೆ ತಡೆಯಾಜ್ಞೆ ಕೋರಿ ದೆಹಲಿ ಹೈ ಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಕೇಜ್ರಿವಾಲ್ ಮುಂದಾಗಿದ್ದರಿಂದ ಅಕ್ಟೋಬರ್ 19ರಂದು ದೆಹಲಿ ಹೈಕೋರ್ಟ್ ಮನವಿ ತಿರಸ್ಕರಿಸಿತ್ತು. ಸಿವಿಲ್ ದಾವೆ ಬಾಕಿಯಿಡುವ ಯಾವುದೇ ಪೂರ್ವಗ್ರಹ ಇಲ್ಲ ಎಂದಿದ್ದ ಹೈಕೋರ್ಟ್, ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆಗಳು ಬೇರೆ ಬೇರೆ ಎಂದಿತ್ತು.[ಕೇಜ್ರಿವಾಲ್ ವಿರುದ್ಧ 10 ಕೋಟಿ ರು ಮಾನನಷ್ಟ ಮೊಕದ್ದಮೆ!]
ಜೇಟ್ಲಿ ಹೈಕೋರ್ಟ್ ನಲ್ಲಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ವಿಚಾರದಲ್ಲಿ ತಮ್ಮ ವಿರುದ್ಧ ಮಾನಹಾನಿಯಾಗುವಂತೆ ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹಾಗೂ ಇತರ ಐವರು ಎಎಪಿ ಮುಖಂಡರ ವಿರುದ್ಧ ಕೆಳಹಂತದ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದರು.