ಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ದುರ್ಮರಣ
ನವದೆಹಲಿ, ಡಿಸೆಂಬರ್ 07: ಬೆಂಕಿಯಲ್ಲಿ ಬೆಂದು ಹೋಗಿದ್ದ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೃದಯಾಘಾತಕ್ಕೊಳಗಾಗಿ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ನ್ಯಾಯಾಲಯಕ್ಕೆ ಹೋಗುವ ಹಾದಿಯಲ್ಲಿ ಆಕೆಯ ಮೇಲೆ ಆರೋಪಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ
ಲಕ್ನೋದ ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆಯಿಂದ ಏರ್ ಲಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆತರಲಾಗಿತ್ತು. ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:40ಕ್ಕೆ ಮೃತ ಪಟ್ಟಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ
"ಆಸ್ಪತ್ರೆಗೆ ಕರೆ ತಂದಾಗ ಆಕೆ ದೇಹದ ಶೇ 90ರಷ್ಟು ಭಾಗ ಸುಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ನಲ್ಲಿರುವ ಆಕೆ ಸ್ಥಿತಿ ಗಂಭೀರವಾಗಿತ್ತು, ರಾತ್ರಿ 11:10ಕ್ಕೆ ಮೊದಲಿಗೆ ಹೃದಯಸ್ತಂಭನವಾಯಿತು, ಸತತ ಪ್ರಯತ್ನದ ನಂತರವೂ ಆಕೆಯನ್ನು ಬದುಕಿಸಲು ಆಗಲಿಲ್ಲ'' ಎಂದು ಪ್ಲಾಸ್ಟಿಕ್ ಸರ್ಜರಿ, ಸುಟ್ಟಗಾಯಗಳ ಚಿಕಿತ್ಸಾ ತಜ್ಞ ಡಾ ಶಲಾಬ್ ಕುಮಾರ್ ತಿಳಿಸಿದರು.
ಉನ್ನಾವೊ ಬಳಿ ಗ್ರಾಮವೊಂದರಲ್ಲಿ 23 ರ ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಇದರ ಬಗ್ಗೆ ಯುವತಿಯು ಮಾರ್ಚ್ ನಲ್ಲಿಯೇ ದೂರು ದಾಖಲಿಸಿದ್ದರು. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದರು.
ಯುವತಿಯು ಮಾರ್ಚ್ ತಿಂಗಳಿನಲ್ಲಿಯೇ ಇಬ್ಬರ ವಿರುದ್ಧ ದೂರು ದಾಖಲು ಮಾಡಿದ್ದರೂ ಸಹ ಪೊಲೀಸರು ಎಫ್ಐಆರ್ ದಾಖಲಿಸಿದ ಕೆಲವು ದಿನಗಳ ನಂತರ ಒಬ್ಬ ಆರೋಪಿಯನ್ನು ಮಾತ್ರವೇ ಬಂಧಿಸಿದ್ದರು. ಮತ್ತೊಬ್ಬನನ್ನು ಈ ವರೆಗೂ ಬಂಧಿಸಿಲ್ಲ. ಒಬ್ಬ ಆರೋಪಿಗೆ 10 ದಿನಗಳ ಹಿಂದೆ ಜಾಮೀನು ಸಿಕ್ಕಿದೆ.
ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬರುವ ವೇಳೆಯಲ್ಲಿ ಶಿವರಾಂ ತ್ರಿವೇದಿ, ಶುಭಂ ತ್ರಿವೇದಿ ಎಂಬ ಇಬ್ಬರು ಆರೋಪಿಗಳು ಸೇರಿದಂತೆ ಹರಿಶಂಕರ್ ತ್ರಿವೇದಿ, ರಾಮ್ ಕಿಶೋರ್ ತ್ರಿವೇದಿ, ಉಮೇಶ್ ವಾಜಪೇಯಿ ಎಂಬ ಮೂವರು ಸೇರಿ ಒಟ್ಟು ಐದು ಮಂದಿ ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.