ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ : ದೇವೇಗೌಡ
ನವದೆಹಲಿ, ಫೆ.10 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ತೃತೀಯ ರಂಗದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ದೆಹಲಿಯಲ್ಲಿ ಸೋಮವಾರ ಎಚ್.ಡಿ.ದೇವೇಗೌಡ, ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಹಾಗೂ ಎಡಪಕ್ಷ ನಾಯಕ ಪ್ರಕಾಶ್ ಕಾರಟ್ ಮುಂತಾದ ಸಮನ ಮನಸ್ಕ ಪಕ್ಷಗಳ ನಾಯಕರು ಸಭೆ ನಡೆಸಿದರು.
ಸೋಮವಾರ ದೆಹಲಿಯ ಸರ್ದಾರ್ ಗಂಜ್ನಲ್ಲಿರುವ ದೇವೇಗೌಡರ ನಿವಾಸದಲ್ಲಿ ನಡೆದ ತೃತೀಯ ರಂಗ ನಾಯಕರ ಸಭೆಯ ಬಳಿ ಎಚ್.ಡಿ.ದೇವೇಗೌಡ ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನ ಮುಗಿದ ಬಳಿಕ ಬೆಂಗಳೂರಿನಲ್ಲಿ ತೃತೀಯ ರಂಗದ ಬೃಹತ್ ಸಮಾವೇಶ ನಡೆಸಲಾಗುವುದು. ಇದರ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದರು.

ತಾವು ಮಾತ್ರ ಸ್ಪರ್ಧೆ : ಲೋಕಸಭೆ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ತಮ್ಮ ಕುಟುಂಬದ ಯಾವ ಸದಸ್ಯರು ಸ್ಪರ್ಧಿಸುವುದಿಲ್ಲ. ತಾವು ಮಾತ್ರ ಸ್ಪರ್ಧಿಸುವುದಾಗಿ ಎಚ್.ಡಿ.ದೇವೇಗೌಡ ಈ ಸಮಯದಲ್ಲಿ ಸ್ಪಷ್ಟನೆ ನೀಡಿದರು. ಎಲ್ಲರೂ ಚುನಾವಣೆಗೆ ಸ್ಪರ್ಧಿಸುವುದರಿಂದ ರಾಜ್ಯಾದ್ಯಂತ ಪ್ರಚಾರ ನಡೆಸಲು ಕಡಿಮೆ ಸಮಯಾವಕಾಶ ದೊರೆಯುತ್ತದೆ, ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. [ತೃತೀಯರಂಗ ಉದಯಕ್ಕೆ 11 ಪಕ್ಷಗಳ ಸಾಥ್]
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್, ಎಡಪಕ್ಷ ನಾಯಕ ಪ್ರಕಾಶ್ ಕಾರಟ್ ಸೇರಿದಂತೆ, 11 ಸಮಾನ ಮನಸ್ಕ ಪಕ್ಷಗಳ ನಾಯಕರ ಸಭೆಯನ್ನು ಔಪಚಾರಿಕವಾಗಿ ನಡೆಸಿದ್ದೇವೆ. ತೃತೀಯ ರಂಗವನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಬಿಹಾರ ಸಿಎಂ ನಿತೀಶ್ ಕುಮಾರ್ ಇದೇ ಮೊದಲ ಬಾರಿಗೆ ಸೋಮವಾರ ತೃತೀಯ ರಂಗ ನಾಯಕರ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಎಡಪಕ್ಷ ನಾಯಕರಾದ ಎ.ಬಿ.ಬರ್ಧನ್, ಜಾತ್ಯತೀತ ಜನತಾದಳ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications